ವಿಚಾರವಾದಿಗಳಿಗೆ ಹಿನ್ನಡೆ: ಕುಕ್ಕೆ ಮಡೆಸ್ನಾನ ಯಥಾಸ್ಥಿತಿ

ಮಡೆಸ್ನಾನ ರೂಪಾಂತರಗೊಳಿಸಿ ದೇವರ ನೈವೇದ್ಯ ಇಟ್ಟ ಎಲೆಯ ಮೇಲೆ 'ಎಡೆಸ್ನಾನ' ನಡೆಸಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ನೀಡಿತ್ತು.
ಈ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ಈಗ ತಡೆಯಾಜ್ಞೆ ನೀಡಿದೆ. ಹೀಗಾಗಿ ಎಂದಿನಂತೆ ನಡೆದುಕೊಂಡು ಬರುತ್ತಿರುವ ಮಡೆಸ್ನಾನ ಪದ್ಧತಿ ಮುಂದುವರಿದುಕೊಂಡು ಹೋಗಲಿದೆ.
ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಹರಕೆ ರೂಪದಲ್ಲಿ ಉರುಳುವ ಮಡೆ ಮಡೆಸ್ನಾನ 'ಅನಿಷ್ಠ' ಅದನ್ನು ಕೂಡಲೇ ನಿಷೇಧಿಸಬೇಕೆಂದು ನಿಡುಮಾಮಿಡಿ ಶ್ರೀ, ದೊರೆಸ್ವಾಮಿ ಅಯ್ಯಂಗಾರ್, ಪ್ರೊ. ಗೋವಿಂದ ರಾವ್, ಮರುಳುಸಿದ್ದಪ್ಪ, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ 11 ಮಂದಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯವು ಮಡೆಮಡೆಸ್ನಾನ ನಿಷೇಧಿಸಬೇಕು ಎನ್ನುವ ಪ್ರಗತಿಪರರ ಮತ್ತು ವಿಚಾರವಾದಿಗಳ ವಾದವನ್ನು ಆಲಿಸಿ, ಸರಕಾರದ ನಿಲುವನ್ನು ಕೇಳಿತ್ತು.
ಸರಕಾರದ ಪರ ವಕೀಲರು ಭಕ್ತರ ನಂಬಿಕೆ, ಶ್ರದ್ಧೆಯ ಮಡೆಮಡೆಸ್ನಾನ ಹರಕೆ ಸೇವೆಯನ್ನು ನಿಲ್ಲಿಸುವುದು ಸೂಕ್ತವಲ್ಲ, ಸೇವೆಯ ಸ್ವರೂಪವನ್ನು ರೂಪಾಂತರ ಮಾಡಿ ಅವಕಾಶ ಕಲ್ಪಿಸಲಾಗುವುದು ಎನ್ನುವ ವಾದವನ್ನು ನ್ಯಾಯಾಲಯದ ಮುಂದಿಟ್ಟಿತ್ತು.
ಆದರೆ ವಿಚಾರವಾದಿಗಳು ಮತ್ತು ಇತರರ ವಾದಕ್ಕೆ ಮಣೆ ಹಾಕದೇ ಸರಕಾರದ ನಿಲುವನ್ನು ಎತ್ತಿ ಹಿಡಿದ ರಾಜ್ಯ ಉಚ್ಚ ನ್ಯಾಯಾಲಯ ಈ ವರ್ಷದಿಂದ ಮಡೆಮಡೆಸ್ನಾನ ಹರಕೆ ಸೇವೆಯನ್ನು ರೂಪಾಂತರಗೊಳಿಸಿ ನಡೆಸಲು ತೀರ್ಪು ನೀಡಿತ್ತು.
ನ್ಯಾಯಾಲಯದ ಈ ಆದೇಶದ ವಿರುದ್ದ ಕರ್ನಾಟಕ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಸುಪ್ರೀಂ ಮೆಟ್ಟಲೇರಿತ್ತು. ಅರ್ಜಿ ಕುರಿತು ವಿಚಾರಿಸಿದ ಸುಪ್ರೀಂಕೋರ್ಟ್ ಮಡೆಸ್ನಾನ ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಆದೇಶ ನೀಡಿದೆ.












Click it and Unblock the Notifications