ಜಿಂದಾಲ್ ಡೀಲ್: ಜೀ ಪತ್ರಕರ್ತರ ಬಂಧನ

ಜಿಂದಾಲ್ ಕಂಪನಿ ವಿರುದ್ಧ ಸುದ್ದಿ ಪ್ರಸಾರ ಮಾಡದಿರಲು ಜೀ ನ್ಯೂಸ್ ವರದಿಗಾರರು 100 ಕೋಟಿ ರು ಕೇಳಿದ್ದರು ಎಂದು ನವೀನ್ ಜಿಂದಾಲ್ ಆರೋಪಿಸಿದ್ದರು. ಜಿಂದಾಲ್ ಅವರ ಹೇಳಿಕೆ ಸುಳ್ಳು. ಇದರಿಂದ ನಮ್ಮ ಜೀ ಟಿವಿ ಬ್ರ್ಯಾಂಡ್ ಗೆ ಹೊಡೆತ ಬಿದ್ದಿದೆ ಎಂದು ಹೇಳಿ ಜೀ ಸಮೂಹ ಸಂಸ್ಥೆ ಜಿಂದಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಆದರೆ, ಕಳೆದ ರಾತ್ರಿ ಜೀ ನ್ಯೂಸ್ ಸಂಪಾದಕ ಸುಧೀರ್ ಚೌಧುರಿ ಹಾಗೂ ಜೀ ಬಿಸಿನೆಸ್ ಚಾನೆಲ್ ನ ಮುಖ್ಯಸ್ಥ ಸಮೀರ್ ಅಹ್ಲುವಾಲಿಯಾ ಅವರನ್ನು ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬುಧವಾರ ನ್ಯಾಯಲಯದ ಮುಂದೆ ಹಾಜರುಪಡಿಸಲಾಗುತ್ತೆ.
ಜೀ ಟಿವಿ ತಂಡ ಒಡ್ಡಿದ್ದ ಡೀಲ್ ಕುರಿತಂತೆ ಗುರುವಾರ (ಅ.25) ಸುದ್ದಿಗೋಷ್ಠಿ ನಡೆಸಿದ ನವೀನ್, ಅವರು ತೋರಿಸಿದ ವಿಡಿಯೋ ಕ್ಲಿಪ್ಪಿಂಗ್ ನಕಲಿಯಾಗಿದೆ ಎಂದು ಜೀ ನ್ಯೂಸ್ ಹೇಳಿತ್ತು.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಕಂಪನಿ ವಿರುದ್ಧ ಸ್ಟಿಂಗ್ ಆಪರೇಷನ್ ಜೀ ಟಿವಿ ನಡೆಸಿತ್ತು. ಈ ವಿಡಿಯೋ ಪ್ರಸಾರವಾಗಬಾರದು ಎಂದರೆ ಕೋಟ್ಯಂತರ ರುಪಾಯಿ ನೀಡುವಂತೆ ಬೆದರಿಕೆ ಒಡ್ಡಿತ್ತು ಎಂದು ನವೀನ್ ಜಿಂದಾಲ್ ಆರೋಪಿಸಿದ್ದರು.ವಿಡಿಯೋದಲ್ಲಿ ಜೀ ನ್ಯೂಸ್ ವರದಿಗಾರ ಹಾಗೂ ಜಿಂದಾಲ್ ಸಂಸ್ಥೆ ಸಿಬ್ಬಂದಿ ಜೊತೆ ಡೀಲ್ ಮಾಡುತ್ತಿರುವ ದೃಶ್ಯಗಳಿದೆ.
ಅದರೆ, ನೆವೀನ್ ಜಿಂದಾಲ್ ಮಾಡಿದ ಆರೋಪಗಳನ್ನು ಜೀ ಟಿವಿ ಸಂಸ್ಥೆ ನಿರಾಕರಿಸಿತ್ತು. ಈ ರೀತಿ ಆರೋಪಗಳು ಈ ಹಿಂದೆ ಕೂಡಾ ಕೇಳಿ ಬಂದಿತ್ತು. ನಾವು ಇದಕ್ಕೆಲ್ಲ ಹೆದರುವುದಿಲ್ಲ ಎಂದು ಜೀ ಎಂಟರ್ ಪ್ರೈಸರ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪುನೀತ್ ಗೋಯಾಂಕ ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ನವೀನ್ ಜಿಂದಾಲ್ ಅವರು ಪುರಾವೆ ಸಮೇತ ಜೀ ಟಿವಿ ಡೀಲ್ ಬಯಲು ಮಾಡಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ಜಿಂದಾಲ್ ಸಂಸ್ಥೆ ಪಾತ್ರ ಇದೆ ಎಂದು ಜೀ ನ್ಯೂಸ್ ವರದಿ ಮಾಡಿತ್ತು.












Click it and Unblock the Notifications