ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೆ ಹಿನ್ನೆಡೆ
ನ.15 ರಿಂದ ನ.30 ರವರೆಗೆ ತಮಿಳುನಾಡಿಗೆ ಸುಮಾರು 4.5 ಟಿಎಂಸಿ ಅಡಿ ಗಳಷ್ಟು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿ(ಸಿಎಂಸಿ ) ಆದೇಶ ನೀಡಿದೆ.
ಆದರೆ, ತಮಿಳುನಾಡು ಸರ್ಕಾರ ಕೇಳಿದ್ದ 45 ಟಿಎಂಸಿ ಮನವಿಯನ್ನು ಸಿಎಂಸಿ ಪುರಸ್ಕರಿಸಿಲ್ಲ. ಬಾಕಿ ಉಳಿದಿರುವ ಬ್ಯಾಕ್ ಲಾಗ್ ನೀರಿನ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪರಿಹಾರ ಪಡೆಯುವಂತೆ ಸಿಎಂಸಿ ಉಭಯ ರಾಜ್ಯಗಳಿಗೂ ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಡಿವಿ ಸಿಂಗ್ ಸೂಚಿಸಿದ್ದಾರೆ.
ರಾಜ್ಯದ ನಿಲುವೇನು?: ರಾಜ್ಯದ ಜಲಾಶಯಗಳಿಂದ ನೀರು ಬಿಡಲು ಸಾಧ್ಯವಿಲ್ಲ. ಆದರೆ, ಮಳೆಯ ಕಾರಣ ಹೊರ ಹರಿವು ಹೆಚ್ಚಾಗಿರುವುದರಿಂದ ನೀರು ಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಇದಕ್ಕೂ ಮುನ್ನ ಅಕ್ಟೋಬರ್ 31 ರಂದು ನಡೆದ ಸಭೆಯಲ್ಲೂ ಕರ್ನಾಟಕಕ್ಕೆ ಹಿನ್ನಡೆ ಉಂಟಾಗಿತ್ತು. ಒಟ್ಟಾರೆ 5.5 ಟಿಎಂಸಿ ಕಾವೇರಿ ನೀರು ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ. ನ.15ರೊಳಗೆ 4 ಟಿಎಂಸಿ ಅಡಿ ನೀರನ್ನು ಕರ್ನಾಟಕದಿಂದ ತಮಿಳುನಾಡಿಗೆ ಹರಿಸಬೇಕು ಎಂದು ಸೂಚಿಸಲಾಗಿತ್ತು.
ಆದರೆ, ಸಭೆಯಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರು ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಮಳೆ ಕೊರತೆ ಇದೆ. ಅಕಾಲಿಕ ಚಂಡಮಾರುತ ಪರೋಕ್ಷವಾಗಿ ಕೃಷಿಕರಿಗೆ ಹೊಡೆತ ಕೊಟ್ಟಿದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲಿ ಕರ್ನಾಟಕ ಸರ್ಕಾರ ದೃಢ ನಿರ್ಧಾರ ಕೈಗೊಂಡಿದ್ದು, ತಮಿಳುನಾಡಿಗೆ ಮತ್ತೊಮ್ಮೆ ನೀರು ಬಿಡಲು ಸಾಧ್ಯವಿಲ್ಲ ಎಂದು ಎಸ್ ವಿ ರಂಗನಾಥ್ ಸ್ಪಷ್ಟಪಡಿಸಿದ್ದಾರೆ.
ಈವರೆಗೂ 13, 000 ಕ್ಯೂಸೆಕ್ಸ್ ನೀರು ಹರಿಸಲಾಗಿದೆ. ಕಾವೇರಿ ಕೊಳ್ಳದಲ್ಲಿ ಒಳ್ಳೆ ಮಳೆಯಾಗಿರುವ ಕಾರಣ ಗಡಿಭಾಗದ ಬಿಳಿಗುಂಡ್ಲು ಜಲಾಗಾರದಿಂದ ಹೊರಹರಿವು ಹೆಚ್ಚಾಗಿದೆ. ಆಲ್ಲಿಂದ ತಕ್ಷಣಕ್ಕೆ ನೀರು ಬಿಡಬಹುದು ಎಂದು ಎಸ್ ವಿ ರಂಗನಾಥ್ ಹೇಳಿದ್ದಾರೆ.
15 ಟಿಎಂಸಿ ಅಥವಾ ಪ್ರತಿದಿನ 1 ಟಿಎಂಸಿಯಂತೆ ನೀರು ಬಿಡಬೇಕು ಎಂದು ತಮಿಳುನಾಡು ಮನವಿ ಸಲ್ಲಿಸಿತ್ತು. ಅದರೆ, 9 ಟಿಎಂಸಿ (8.745) ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶ ಅ.11ರಂದು ನೀಡಿತ್ತು.
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜೊತೆ ಗುರುವಾರ (ನ.15) ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನವದೆಹಲಿಯ ಶಕ್ತಿ ಭವನದಲ್ಲಿ ನಡೆಸಲಾಯಿತು.













Click it and Unblock the Notifications