ಕರ್ನಾಟಕ ಬಂದ್ ತಿರಸ್ಕರಿಸಿದ ಕರಾವಳಿ ಜನತೆ

ಅಲ್ಲಲ್ಲಿ ಸಣ್ಣ ಪುಟ್ಟ ಪ್ರತಿಭಟನೆಗಳು ನಡೆದದ್ದು ಬಿಟ್ಟರೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಂದ್ ಬಿಸಿ ದೈನಂದಿನ ಜೀವನಕ್ಕೆ ಯಾವುದೇ ರೀತಿಯಲ್ಲಿ ಮುಟ್ಟಲಿಲ್ಲ.
ಉಡುಪಿಯ ಕರಾವಳಿ ಹೋಟೆಲ್ ಮತ್ತು ಅಂಬಲಪಾಡಿ ಬೈಪಾಸ್ ಬಳಿ ಜಯಕರ್ನಾಟಕ ವೇದಿಕೆಯ ಮತ್ತು ರೈತ ಸಂಘದ ಕಾರ್ಯಕರ್ತರು ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಉಡುಪಿ - ಮಣಿಪಾಲ ಹೆದ್ದಾರಿಯಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.
ಉಡುಪಿಯಲ್ಲಿ ಕಾಪು ಮತ್ತು ಉಡುಪಿ ಘಟಕದ ಛಾಯಾಗ್ರಾಹಕರ ಸಂಘ ಬೈಕ್ ಜಾಥಾ ನಡೆಸಿತು. ರೈತ ಸಂಘ ಮತ್ತು ಜಯಕರ್ನಾಟಕ ಘಟಕದ ಕಾರ್ಯಕರ್ತರು ರಾ.ಹೆ 66 ರಲ್ಲಿ ಮಾನವ ಸರಪಳಿ ನಡೆಸಿ ರಸ್ತೆ ತಡೆ ನಡೆಸಿದರು.
ಮಂಗಳೂರು ರೋಲಿಂಗ್ ಸ್ಕೇಟಿಂಗ್ ಕ್ಲಬ್, ದಕ್ಷಿಣಕನ್ನಡ ಮಾಸ್ಟರ್ ಅಥ್ಲೆಟಿಕ್ ಅಸೋಷಿಯೇಶನ್, ದಕ್ಷಿಣ ಕನ್ನಡ ಕಾವೇರಿ ಹೋರಾಟ ಸಮಿತಿ, ಕರವೇ ರಿಕ್ಷಾ ಘಟಕ, ದಕ್ಷಿಣಕನ್ನಡ ಉಡುಪಿ ಕೊಡವ ಸ್ಟೂಡೆಂಟ್ ಅಸೋಷಿಯೇಶನ್ ಮುಂತಾದ ಸಂಘಟನೆಗಳ ಕಾರ್ಯಕರ್ತರು ಮಂಗಳೂರಿನಲ್ಲಿ ಜಾಥ ನಡೆಸಿ ಪ್ರತಿಭಟನೆ ನಡೆಸಿದರು.
ಮಂಗಳೂರು ಜ್ಯೋತಿ ಟಾಕೀಸ್ ವೃತ್ತದಿಂದ ಹಂಪನಕಟ್ಟಾ ವೃತ್ತದ ವರೆಗೆ ಮೆರವಣಿಗೆ ನಡೆಸಿದ ಕರವೇ ಮತ್ತು ಇತರ ಸಂಘಟನೆಗಳ ಸದಸ್ಯರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಗೊಳಿಸಿದರು.
ಎರಡೂ ಜಿಲ್ಲೆಗಳಲ್ಲಿ ಶಾಲಾ, ಕಾಲೇಜು, ಸರಕಾರಿ ಕಚೇರಿಗಳು, ಬಸ್ ಸಂಚಾರ, ವಹಿವಾಟು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಸಣ್ಣಪುಟ್ಟ ಪ್ರತಿಭಟನೆಗಳನ್ನು ಬಿಟ್ಟರೆ ಈ ಎರಡೂ ಜಿಲ್ಲೆಗಳ ಜನತೆಯಿಂದ ಕರ್ನಾಟಕ ಬಂದ್ ಗೆ ನಿರೀಕ್ಷಿತ ಬೆಂಬಲ ವ್ಯಕ್ತವಾಗಲೇ ಇಲ್ಲ.
ಈ ಹಿಂದೆ ಡಾ. ರಾಜ್ ನಿಧನದ ಸಮಯದಲ್ಲಿ ಮತ್ತು ಬೆಳಗಾವಿ ವಿಷಯದಲ್ಲಿ ನಡೆದ ಕರ್ನಾಟಕ ಬಂದ್ ಗೆ ಈ ಎರಡು ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದನ್ನು ಇಲ್ಲಿ ನಾವು ಸ್ಮರಿಸಬಹುದು.












Click it and Unblock the Notifications