ಜೆಪಿ ನಗರ: ಹಿರಿಯ ಪೇದೆ ಮೇಲೆ ಇನ್ಸ್‌ಪೆಕ್ಟರ್ ಪೌರುಷ

jp-nagar-pi-bs-angadi-abuses-hc-channamalle-gowda
ಬೆಂಗಳೂರು, ಸೆ. 21: ಬೆಂಗಳೂರು ದಕ್ಷಿಣದ ಜೆಪಿ ನಗರ ಇನ್ಸ್‌ಪೆಕ್ಟರ್ ಬಿಎಸ್ ಅಂಗಡಿ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಈ ಬಾರಿ ಅವರು ಕರ್ತವ್ಯನಿರತ ಪೇದೆಯ ಮೇಲೆ ಪೌರುಷ ತೋರಿ, ವಿವಾದಕ್ಕೀಡಾಗಿದ್ದಾರೆ.

ರಾಜಕೀಯವಾಗಿ ಪ್ರಭಾವಿಯಾಗಿರುವ ಇನ್ಸ್‌ಪೆಕ್ಟರ್ ಅಂಗಡಿ (ಚಿತ್ರದಲ್ಲಿ ಬಲ ತುದಿಯಲ್ಲಿರುವವರು) ಈ ಹಿಂದೆಯೂ ಬಾನಗಡಿಗಳನ್ನು ಮಾಡಿಕೊಂಡಿದ್ದಾರೆ. ದರ್ಪವನ್ನೇ ಮೈಗೂಡಿಸಿಕೊಂಡಿರುವ ಈ ಅಧಿಕಾರಿ ಅಂತಾರಾಷ್ಟ್ರೀಯ ಮಟ್ಟದ ತರಬೇತಿಗಳನ್ನು ಪಡೆದಿದ್ದರೂ ತೀರಾ ಲೋಕಲ್ ಆಗಿ ಕಾರ್ಯನಿರ್ವಹಿಸುವುದರಲ್ಲಿ ಮೈಮರೆಯುತ್ತಾರೆ.

ಇನ್ಸ್‌ಪೆಕ್ಟರ್ ಅಂಗಡಿ (49) ಇತ್ತೀಚೆಗೆ ದೂರು ನೀಡಲು ಬಂದಿದ್ದವರ ಮೇಲೆ ಕಾಲ್ಕೆರೆದುಕೊಂಡು ಜಗಳಕ್ಕೆ ಹೋಗಿದ್ದರು. ಅದು ವಿಕೋಪಕ್ಕೆ ಹೋಗಿದೆ. ಕೋರ್ಟ್, ಮಾನವ ಹಕ್ಕುಗಳ ಆಯೋಗಕ್ಕೂ ಈ ಬಗ್ಗೆ ದೂರು ಹೋಗಿದೆ.

ತಮ್ಮ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ವೃದ್ಧ ಸ್ವರ್ಣಾಂಬ ದಂಪತಿಯ ಕೊಲೆಗಳಾದಾಗ ಈ ಹಿಂದೆ ಇದೇ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ದಕ್ಷ ಅಧಿಕಾರಿ, ಪಕ್ಕದ ಠಾಣೆಯಿಂದ ಎದ್ದು ಬಂದು ಕೊಲೆ ರಹಸ್ಯ ಬೇಧಿಸಬೇಕಾಗಿ ಬಂತು.

ಪ್ರಕರಣ ಏನು?: ಮಂಗಳವಾರ ಸಂಜೆ ಈ ಪ್ರಕರಣ ನಡೆದಿದೆ. ಹೆಡ್ ಕಾನ್ಸ್ ಟೇಬಲ್ ಚನ್ನಮಲ್ಲ ಗೌಡ ಹಳೆಯ ಕೇಸಿಗೆ ಸಂಬಂಧಿಸಿದಂತೆ ಕರ್ತವ್ಯದ ಮೇರೆಗೆ ಸೆಷನ್ಸ್ ಕೋರ್ಟಿಗೆ ಮಧ್ಯಾಹ್ನ ತೆರಳಿದ್ದರು. ಹೋಗುವಾಗ ಠಾಣೆಯಲ್ಲಿದ್ದ ತಮ್ಮ ಹಿರಿಯ ಅಧಿಕಾರಿಗಳಿಗೆ ಮತ್ತು ರೈಟರ್ ಗೆ ತಿಳಿಸಿ ಹೋಗಿದ್ದಾರೆ. ಆದರೆ ಸಂಜೆ 7.30ಕ್ಕೆ ಅವರು ಠಾಣೆಗೆ ವಾಪಸಾಗಿದ್ದಾರೆ.

ಈ ಮಧ್ಯೆ, ಧಾರವಾಡ ಗ್ರಾಮಾಂತರ ಶಾಸಕಿ ಸೀಮಾ ಮಸೂತಿ ಅವರ ಸೋದರನೂ ಆಗಿರುವ ಅಂಗಡಿ (ಜೆಪಿ ನಗರ ಠಾಣೆಯ ಹಾಲಿ ಇನ್ಸ್‌ಪೆಕ್ಟರ್) ಹೆಡ್ ಕಾನ್ಸ್ ಟೇಬಲ್ ಚನ್ನಮಲ್ಲ ಗೌಡ ಅವರ ಮೊಬೈಲಿಗೆ ಕರೆ ಮಾಡಿದ್ದಾರೆ. ಆದರೆ ಕೋರ್ಟಿನಲ್ಲಿದ್ದ ಪೇದೆ ಚನ್ನಮಲ್ಲ ಕರೆ ಸ್ವೀಕರಿಸಿಲ್ಲ.

ಆದರೆ ಕೋರ್ಟ್ ಶಿಷ್ಟಾಚಾರದಿಂದಾಗಿ ತಮ್ಮ ಮೇಲಾಧಿಕಾರಿಯ ಕರೆ ಸ್ವೀಕರಿಸದ ಪೇದೆ ಚನ್ನಮಲ್ಲ ಕೋರ್ಟಿನಿಂದ ಹೊರಬರುತ್ತಿದ್ದಂತೆ ಇನ್ಸ್‌ಪೆಕ್ಟರ್ ಅಂಗಡಿಗೆ ಕರೆ ಮಾಡಿದ್ದಾರೆ. ಆ ವೇಳೆಗೆ ಮುನಿದ ಮುನಿಯಾಗಿದ್ದ ಅಂಗಡಿ ಪೇದೆ ಚನ್ನಮಲ್ಲ ಮೇಲೆ ಹರಿಹಾಯ್ದಿದ್ದಾರೆ. 'ಏನೋ ನೀನೇನು ಐಪಿಎಸ್ ಆಫೀಸರ್ರೋ? ನೀನು ಠಾಣೆಯಿಂದ ಹೊರಹೋಗುವಾಗ ನನಗೆ ತಿಳಿಸಬೇಕು ಅಂತ ಪರಿಜ್ಞಾನವಿಲ್ಲವಾ? ನಾನು ಯಾರು ಅಂತ ಗೊತ್ತಿಲ್ಲವಾ? ಏನ್ ಅಂದ್ಕೊಂಡ್ಬಿಟ್ಟಿದ್ದೀಯಾ ನನ್ನ ಬಗ್ಗೆ? ಎಂದೆಲ್ಲಾ ಇನ್ಸ್‌ಪೆಕ್ಟರ್ ಸಾಹೇಬರು ಅಂಗಡಿ ತೆರೆದಿಟ್ಟಿದ್ದಾರೆ.

'ನಾನು ಎಂತೆಂಥಾ ಹಿರಿಯ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡಿ, ಸೈ ಎನಿಸಿಕೊಂಡಿದ್ದೇನೆ. ಡಿಸಿಪಿ ಸೋನಿಯಾ ನಾರಂಗ್ ಮೇಡಂ ಅವರೇ ನನ್ನನ್ನು ಅಭಿನಂದಿಸಿದ್ದಾರೆ. ಆದ್ರೆ ಇವಯ್ಯ ರಾಂಗ್ ಆಗ್ತಾರೆ. ಯಾವ ದಡ್ಡ ಶಿಖಾಮಣಿಯೋ ನಿನಗೆ ಕೆಲ್ಸ ಕಲ್ಸಿದ್ದು ಎಂದೆಲ್ಲಾ ರೇಗಾಡ್ತಾರೆ. ನನ್ನ ಬೇಕಾದ್ರೆ ಬೈಯಲಿ. ಆದರೆ ನನ್ನ ಹಿರಿಯ ಅಧಿಕಾರಿಗಳನ್ನು ಬೈದರೆ ಸುಮ್ನಿರೋಲ್ಲ. ಅಸಲಿಗೆ ಇವರಿಗೆ ನಾನೇನು ಅಪಕಾರ ಮಾಡಿದ್ದೇನೆ ಅಂತ ಹಿಂಗೆಲ್ಲ ಬೈದಾಡ್ತಾರೆ? ಎಂದು ಪೇದೆ ಚನ್ನಮಲ್ಲ ಅಲವತ್ತುಕೊಂಡಿದ್ದಾರೆ.

ಅಂಗಡಿಯ ಕಂಠಶೋಷಣೆ ಮುಗಿದ ಮೇಲೆ ರಾತ್ರಿ ಪಾಳಿಗೆ ಪೇದೆ ಚನ್ನಮಲ್ಲ ವಾಪಸಾದರು. ಆಗಲೂ ಅಂಗಡಿ ತಮ್ಮ ಕೋಪತಾಪ ಪ್ರದರ್ಶಿಸಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಕೆಟ್ಟ ಕೆಟ್ಟದಾಗಿ ಬಯ್ದಾಡಿದ್ದಾರೆ. ಇದನ್ನು ಸಹಿಸದೆ ಪೇದೆ ಚನ್ನಮಲ್ಲ ಸಹ ಜೋರು ಮಾಡಿದ್ದಾರೆ. ಆ ವೇಳೆ ಅಂಗಡಿ ಇನ್ನೇನು ಪೇದೆ ಚನ್ನಮಲ್ಲಗೆ ಎರಡು ಬಾರಿಸುತ್ತಾರೆ ಎಂದೇ ಭಾವಿಸಿದ್ದೆವು.

ಆ ಪಾಟಿಯಿತ್ತು ಅವರ ರೌದ್ರಾವತಾರ ಎಂದು ಠಾಣೆಯ ಸಿಬ್ಬಂದಿ ಘಟನೆಗೆ ಸಾಕ್ಷ್ಯ ನುಡಿದಿದ್ದಾರೆ. ಕೊನೆಗೆ ಪೇದೆ ಚನ್ನಮಲ್ಲ ಅಂದು ಡ್ಯೂಟಿ ಮಾಡಲು ಆಗದೆ ಮನೆಗೆ ವಾಪಸಾಗಿದ್ದಾರೆ. ಪ್ರಕರಣ ನಡೆದಿರುವುದನ್ನು ಒಪ್ಪಿಕೊಂಡ ಅಂಗಡಿ ಸಾಹೇಬರು ತಾನು ಪೇದೆ ಚನ್ನಮಲ್ಲಗೆ ಬೈದಿದ್ದು ನಿಜ ಆದರೆ ಹೊಡೆದಿಲ್ಲ ಎಂದಿದ್ದಾರೆ.

ಇಷ್ಟಕ್ಕೂ ಪೇದೆ ಚನ್ನಮಲ್ಲ ಯಾರಪ್ಪಾ ಅಂದರೆ... 30 ವರ್ಷಗಳಿಂದ ಕ್ರೈಂ ಸೆಕ್ಷನ್ ನಲ್ಲಿ ದುಡಿಯುತ್ತಿದ್ದಾರೆ. ಮುಖ್ಯಮಂತ್ರಿ (ಎಸ್ ಎಂ ಕೃಷ್ಣ ಅಧಿಕಾರಾವಧಿಯಲ್ಲಿ) ಪದಕ ಪುರಸ್ಕೃತರು. ಅನೇಕ ಕ್ಲಿಷ್ಟಕರ ಕೇಸುಗಳನ್ನು ಬೇಧಿಸಿದ್ದಾರೆ. ಹಿರಿಯ ಅಧಿಕಾರಿಗಳಾದ ಟಿ ಸುನಿಲ್ ಕುಮಾರ್, ಅಲೋಕ್ ಕುಮಾರ್, ಎಸ್ ಕೆ ಉಮೇಶ್ ಅಂತಹ ದಕ್ಷ ಅಧಿಕಾರಿಗಳ ಸಮ್ಮುಖದಲ್ಲಿ ಕರ್ತವ್ಯ ನಿಷ್ಠೆ ತೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+