ಇಂದು ನಮ್ಮ ವಾಟಾಳರ ಹುಟ್ಟುಹಬ್ಬ, ಅಭಿನಂದಿಸಿ

ಯಾವ ರೀತಿಯಲ್ಲಿ ಪ್ರತಿಭಟನೆ ನಡೆಸಬಹುದು ಎನ್ನುವುದಕ್ಕೆ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಾಟಾಳ್ ನಾಗರಾಜ್ ಅವರಿಗಿಂತ ಉತ್ತಮ ಉದಾಹರಣೆ ಇನ್ನೊಂದು ಸಿಗಲಾರದು.
ಕನ್ನಡ, ಕರ್ನಾಟಕದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಮೈಸೂರು ಬ್ಯಾಂಕ್ ವೃತ್ತದಲ್ಲಿ (ಹೆಚ್ಚಾಗಿ) ವಾಟಾಳರ ಪ್ರತಿಭಟನೆ ಇದ್ದೇ ಇರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಶಾಪಗ್ರಸ್ತ ಪೀಡಿತ ಜಿಲ್ಲೆಯೆಂದೇ ಕುಖ್ಯಾತಿಗೆ ಒಳಗಾಗಿರುವ ಚಾಮರಾಜನಗರ ಕ್ಷೇತ್ರವನ್ನು ಹಲವಾರು ಬಾರಿ ಶಾಸಕರಾಗಿ ಪ್ರತಿನಿಧಿಸಿರುವ ವಾಟಾಳ್ ಅಪ್ರತಿಮ ಮಾತಿನ ಮಲ್ಲ.
ವಾಟಾಳ್ ಇಲ್ಲದ ಅಸೆಂಬ್ಲಿಗೆ ಕಳೆಯೇ ಇಲ್ಲವೆಂದು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಹಲವಾರು ಬಾರಿ ಹೇಳಿಕೆ ನೀಡಿದ್ದರೂ ಇವರನ್ನು ಒಂದು ಬಾರಿ ಎಂಎಲ್ಸಿ ಮಾಡೋಣವೆಂದು ಯಾವ ಪಕ್ಷವೂ ಮುಂದೆ ಬಂದಿಲ್ಲ, ಮನಸೂ ಮಾಡಿಲ್ಲ.
ವಿದ್ಯುತ್ ಸಮಸ್ಯೆ ಇದ್ದಾಗ ಚಿಮಣಿ ದೀಪ ಚಳುವಳಿ, ತೈಲಬೆಲೆ ಏರಿಕೆಯಾದಾಗ ಕತ್ತೆ, ಕೋಣದ ಮೇಲೆ ಕೂತು ಮೆರವಣಿಗೆ ನಡೆಸಿ ಚಳುವಳಿ, ತಮಟೆ ಚಳುವಳಿ, ಉರುಳು ಸೇವೆ ಹೀಗೆ ಹಲವಾರು ವೈವಿದ್ಯತೆಯ ಚಳುವಳಿಯನ್ನು ಹುಟ್ಟು ಹಾಕಿದವರು ವಾಟಾಳ್ ನಾಗರಾಜ್.
ಮೂಲ ಹುಟ್ಟಿದ ದಿನದಂದು ಹುಟ್ಟುಹಬ್ಬ ಆಚರಿಸಿಕೊಳ್ಳದ ವಾಟಾಳ್ ಸೆಪ್ಟಂಬರ್ 7ರಂದು ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಶುಕ್ರವಾರ (ಸೆ 7) ನಗರದ ಪುರಭವನದಲ್ಲಿ ಬೆಳಿಗ್ಗೆ 11ಗಂಟೆಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮೇಯರ್ ವೆಂಕಟೇಶ್ ಮೂರ್ತಿ, ಮಾಜಿ ಸಚಿವರಾದ ರಾಮಚಂದ್ರ ಗೌಡ, ಎಂ ರಘುಪತಿ, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕನ್ನಡ ಮತ್ತು ಕನ್ನಡ ನಾಡಿನ ಪರ ಹೋರಾಟ ನಡೆಸಿಕೊಂಡು ಬರುತ್ತಿರುವ ವಾಟಾಳ್ ನಾಗರಾಜ್ ಅವರಿಗೆ ಹುಟ್ಟು ಹಬ್ಬದ ಹಾರ್ಥಿಕ ಶುಭಾಶಯಗಳು.
ನೀವೂ.. ಶುಭಾಶಯ ತಿಳಿಸಿ.












Click it and Unblock the Notifications