ಮುಡಾ ಕಚೇರಿ ಮೇಲೆ ಲೋಕಾ ದಾಳಿ, ಜೆಡಿಎಸ್ ತತ್ತರ
ಜೆಡಿಎಸ್ ಶಾಸಕರು ಸೇರಿದಂತೆ ಒಟ್ಟು 7 ಜನರ ಮೇಲೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಲೋಕಾಯುಕ್ತ ಪೊಲೀಸರ ದಾಳಿ ನಿರೀಕ್ಷಿತವಾದರೂ ಸ್ಥಳೀಯ ಜೆಡಿಎಸ್ ಮುಖಂಡರು ಇದರಿಂದ ತತ್ತರಿಸಿದ್ದಾರೆ.
ಲೋಕಾಯುಕ್ತ ಇನ್ಸ್ಪೆಕ್ಟರ್ ಪಿ.ಕೆ.ರಾಜು ನೇತೃತ್ವದ 7 ಅಧಿಕಾರಿಗಳ ತಂಡ ದಾಳಿ ನಡೆಸಿ ಮುಡಾ ಆಯುಕ್ತ ಎಚ್.ಎಸ್.ಶಿವರಾಂ ಅವರಿಂದ ನಿವೇಶನ ಹಂಚಿಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿತು. ಇದೇ ವೇಳೆ ಶಾಸಕರ ವಿರುದ್ಧ ದೂರು ದಾಖಲಿಸಿರುವ ವಕೀಲ ಟಿ.ಎಸ್. ಸತ್ಯಾನಂದ ಒದಗಿಸಿರುವ ದಾಖಲಾತಿಗಳಿಗೂ ಸಂಬಂಧಿಸಿ ಮಾಹಿತಿಗಳನ್ನು ಅಧಿಕಾರಿಗಳು ಪರಿಶೀಲಿಸಿದರು.
ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ರಮೇಶ್ಬಾಬು ಬಂಡಿಸಿದ್ದೇಗೌಡ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅಕ್ಟೋಬರ್ ಒಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಾಲಯ ಸೂಚಿಸಿದೆ.
ಈ ನಡುವೆ ಮೂವರು ಶಾಸಕರು ನಿರೀಕ್ಷಣಾ ಜಾಮೀನಿಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಗುರುವಾರ ಅರ್ಜಿ ಸಲ್ಲಿಸಿದ್ದು, ಅ. 3ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಇನ್ನಿಬ್ಬರು ಆರೋಪಿ ಗಳಾದ ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ನಿರ್ದೇಶಕ ಎಂ.ಜೆ.ಚಿಕ್ಕಣ್ಣ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.
ಕೇಸ್ ಹಿನ್ನಲೆ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಅಕ್ರಮವಾಗಿ ನಿವೇಶನ ಪಡೆದ ಆರೋಪ ಎದುರಿಸುತ್ತಿರುವ ಜೆಡಿಎಸ್ನ ಮೂವರು ಶಾಸಕರೂ ಸೇರಿದಂತೆ, 7 ಜನರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.
ವಕೀಲ ಟಿ.ಎಸ್. ಸತ್ಯಾನಂದ ಅವರು ನೀಡಿದ್ದ ದೂರಿನ ಮೇರೆಗೆ, ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯವು ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ರಮೇಶ ಬಂಡಿಸಿದ್ದೇಗೌಡ, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಮಾಜಿ ನಾಮ ನಿರ್ದೇಶಿತ ಸದಸ್ಯ ಎಂ.ಜೆ. ಚಿಕ್ಕಣ್ಣ, ಮಾಜಿ ಆಯುಕ್ತ ಉಪೇಂದ್ರ ನಾಯಕ್, ಟಿ. ನಿಸಾರ್ ಅಹ್ಮದ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಡಾ ವತಿಯಿಂದ ಕೆರೆ ಅಂಗಳದಲ್ಲಿ ನಿರ್ಮಾಣ ಮಾಡಲಾಗಿದ್ದ ವಿವೇಕಾನಂದ ನಗರದಲ್ಲಿನ ನಿವೇಶನಗಳ ಹಂಚಿಕೆಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಮಂಡ್ಯ ಮುಡಾದಿಂದ ಸುಮಾರು 107 ನಿವೇಶನಗಳನ್ನು ನಿಮಯ ಮೀರಿ ನೀಡಲಾಗಿತ್ತು. ಮುಡಾ ಅಧ್ಯಕ್ಷೆ, ಬಿಜೆಪಿಯಿಂದ ನಾಮಾಂಕಿತರಾದ ವಿದ್ಯಾ ನಾಗೇಂದ್ರ ಅವರನ್ನು ಕೂಡಾ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಸತ್ಯಾನಂದ ಅವರು ದೂರು ಸಲ್ಲಿಸಿದ್ದರು.
ಶ್ರೀರಂಗಪಟ್ಟಣ ಶಾಸಕ ರಮೇಶ್, ತನ್ನ ತಾಯಿ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮರಿಗೆ (50 X 80), ಪತ್ನಿ ಸುಮತಿಗೆ (60 X 40) ಹಾಗೂ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜುರ ಪತ್ನಿ ನಾಗಮ್ಮರಿಗೆ (50 X 80)ನಿವೇಶನ ನೀಡಿದ್ದಾರೆ.
ಮೈಸೂರಿನಲ್ಲಿ 2007ರಲ್ಲಿ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಮಂಜೂರು ಮಾಡಿತ್ತು. ಇದೇ ಶಾಸಕರು ಬೆಂಗಳೂರಿನಲ್ಲಿ ನಿವೇಶನ ಪಡೆದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇಷ್ಟೇ ಅಲ್ಲ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ನಿವೇಶನ ಕಬಳಿಸಿರುವ ಶಂಕೆ ವ್ಯಕ್ತವಾಗಿದೆ.