ಮಂತ್ರಿ ಸ್ಥಾನಕ್ಕಾಗಿ ಎಂದೂ ಹಂಬಲಿಸಿದವನಲ್ಲ: ಸಿಟಿ ರವಿ

'ಬಿಜೆಪಿ ಪಕ್ಷಕ್ಕಾಗಿ ಅನುಕ್ಷಣವೂ ದುಡಿದಿದ್ದೇನೆ. ರಾಜಕೀಯಕ್ಕೆ ಸೇರಬೇಕು ಎಂಬುದು ನನ್ನ ಕನಸಾಗಿತ್ತು. ನನ್ನ ಅಖಂಡ ನಿಷ್ಠೆ ಎಂದಿಗೂ ಪಕ್ಷಕ್ಕೇ. ಪಕ್ಷದ ಸಿದ್ಧಾಂತಗಳನ್ನು ಎತ್ತಿಹಿಡಿಯಲು ಸದಾ ಹಾತೆರೆಯುವೆ' ಎಂದು ಬಿಜೆಪಿ ವಕ್ತಾರರೂ ಆಗಿರುವ ಸಿಟಿ ರವಿ ಇಂದು (ಮೊದಲ ಶ್ರಾವಣ ಶನಿವಾರ) ಇಲ್ಲಿ ಹೇಳಿದರು.
ದಕ್ಷಿಣ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಮಂಗಳೂರಿಗೆ ಬಂದ ಸಿಟಿ ರವಿಗೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಆತ್ಮೀಯ ಸನ್ಮಾನ ಏರ್ಪಡಿಸಲಾಗಿತ್ತು.
'ನೋಡಿ, ನಾನೆಂದಿಗೂ ಅಧಿಕಾರ ಅಥವಾ ಸ್ಥಾನಕ್ಕಾಗಿ ಪ್ರಯತ್ನಿಸಿದವನೇ ಅಲ್ಲ. ಏಕೆಂದರೆ ಆ ಸ್ಥಾನಗಳು ಎಂದಿಗೂ ಶಾಶ್ವತವಲ್ಲ. ಆದರೆ ನಿಷ್ಠೆ ಮತ್ತು ಅರ್ಪಣಾ ಮನೋಭಾವದೊಂದಿಗೆ ಪಕ್ಷಕ್ಕಾಗಿ ದುಡಿಯುವ ಮನಸ್ಸು ನನ್ನದು' ಎಂದು ರವಿ ಘೋಷಿಸಿದರು.
'ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಹಾಗಾಗಿ ನನ್ನದೆಲ್ಲ ಮಧ್ಯಮ ವರ್ಗದ ಆಸೆ-ಆಕಾಂಕ್ಷೆಗಳು ಮತ್ತು ಅವೇ ಮೌಲ್ಯಗಳು. ಆದ್ದರಿಂದ ಮತ್ತೊಮ್ಮೆ ಹೇಳುವೆ ನಾನು ಎಂದಿಗೂ ಸಚಿವ ಸ್ಥಾನಕ್ಕಾಗಿ ಆಸೆಪಟ್ಟವನಲ್ಲ' ಎಂದು ಹೇಳಿಕೊಂಡರು.
ಸಚಿವನಾಗಿ ಜಿಲ್ಲೆಗೆ ನನ್ನ ಅಳಿಲು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಅತೀವ ಕೃತಜ್ಞತೆ ತೋರಿದ ರವಿ, ಜಿಲ್ಲೆಯಲ್ಲಿ ಬಾಕಿಯುಳಿದಿರುವ ಅಭಿವೃದ್ಧಿ ಕಾರ್ಯಗಳು ಶೀಘ್ರವೇ ಪೂರ್ಣಗೊಳಿಸುವ ಭರವಸೆ ನೀಡಿದರು. ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ರವಿಗೆ ಆತ್ಮೀಯವಾಗಿ ಸನ್ಮಾನ ಮಾಡಿದರು.
'ರವಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಪಡೆಯಲು ಜಿಲ್ಲೆಯ ಜನರು ಅದೃಷ್ಟ ಮಾಡಿದ್ದಾರೆ. ಅದರಿಂದ ಜನ ಧನ್ಯರಾಗಿದ್ದಾರೆ. ರವಿ ಅವರ ಅಧಿಕಾರದಲ್ಲಿ ಜಿಲ್ಲೆ ಮತ್ತಷ್ಟು ಪ್ರಗತಿ ಕಾಣಲಿದೆ' ಎಂದು ಸಭೆಯಲ್ಲಿ ಹಾಜರಿದ್ದ ಸಂಸದ ನಳೀನ್ ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ಬಳಿಕ ರವಿ ಅವರು ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದರು.












Click it and Unblock the Notifications