ಹೆಂಗಸರನ್ನು ಪಲ್ಲಂಗಕ್ಕೆ ಆಹ್ವಾನಿಸುತ್ತಿದ್ದ ಸೈಕೋ ಅರೆಸ್ಟ್
ಸ್ವಾಮಿ ಅಲಿಯಾಸ್ ಮನೀಷ್ ಪಾಂಡೆ ಅಲಿಯಸ್ ಶ್ರೀಧರ್ (28)ಎಂಬುವವನೇ ಪೊಲೀಸರ ಬಲೆಗೆ ಬಿದ್ದ ವಿಕೃತ ಮನಸ್ಸಿನ ವ್ಯಕ್ತಿ. ಈತ ತನ್ನ ಮೊಬೈಲ್ನಿಂದ ಮಹಿಳೆಯರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮ ಭಾವಚಿತ್ರಗಳನ್ನು ಎಲ್ಲರಿಗೂ ತೋರಿಸುತ್ತೇನೆ. ಇದಕ್ಕೆ ಒಪ್ಪದಿದ್ದರೆ ಎಂ.ಎಂ.ಎಸ್.ನಲ್ಲಿಯೂ ಪ್ರಕಟಿಸಿ ಅವಮಾನ ಮಾಡುತ್ತೇನೆ. ಅದಕ್ಕಾಗಿ ನೀವು ಒಂದು ದಿನ ತನ್ನೊಂದಿಗೆ ಕಳೆಯಬೇಕೆಂದು ಹಲವಾರು ಬಾರಿ ಕರೆಮಾಡುತ್ತಾ ತೊಂದರೆ ನೀಡುತ್ತಿದ್ದ.
ಆರೋಪಿಯ ಪತ್ತೆಗಾಗಿ ಯಶವಂತಪುರ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ವಿಶೇಷ ತಂಡದವರು ಆರೋಪಿಯು ಪತ್ತೆಗಾಗಿ ಗುಬ್ಬಿ, ಚನ್ನರಾಯಪಟ್ಟಣ, ಶ್ರವಣಬೆಳಗೋಳ, ಮತ್ತಿತರ ಕಡೆಗಳಲ್ಲಿ ಸುತ್ತಾಡಿ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಯು ಪೀಣ್ಯ 2ನೇ ಹಂತದ ಪೀಜಾ ಹಟ್ನಲ್ಲಿರುವುದನ್ನು ಖಚಿತಪಡಿಸಿಕೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಳನೆ ತರಗತಿಯವರೆಗೆ ಓದಿರುವ ಈತ ಊರಿನಲ್ಲಿ ಖೋಟಾ ನೋಟು ಪ್ರಕರಣದಲ್ಲೂ ಭಾಗಿಯಾಗಿ ಏಳು ತಿಂಗಳ ಕಾಲ ಮಂಡ್ಯ ಜೈಲಿನಲ್ಲಿದ್ದು ಪ್ರಕರಣ ಮುಗಿಸಿಕೊಂಡು ಹೊರಬಂದಿದ್ದ. ಬಳಿಕ ಬೆಂಗಳೂರಿಗೆ ಬಂದು ಪೀಣ್ಯ 2ನೇ ಹಂತದಲ್ಲಿರುವ ಪೀಜಾ ಹಟ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ ಪೀಜಾವನ್ನು ಮನೆಗಳಿಗೆ ಡೆಲಿವರಿ ಮಾಡುತ್ತಿದ್ದ.
ಆ ಸಮಯದಲ್ಲಿ ಅಮಾಯಕ ಮಹಿಳೆಯರಿಂದ ಮತ್ತು ವಿದ್ಯಾರ್ಥಿನಿಯರಿಂದ ಮೊಬೈಲ್ ದೂರವಾಣಿ ನಂಬರ್ಗಳನ್ನು ಪಡೆದುಕೊಂಡು ಬೇರೆ ಬೇರೆ ಹೆಸರುಗಳಿಂದ ಅವರುಗಳಿಗೆ ತನ್ನ ಮೊಬೈಲ್ನಿಂದ ಅಶ್ಲೀಲ ಎಸ್.ಎಂ.ಎಸ್/ದೂರವಾಣಿ ಕರೆಗಳನ್ನು ಮಾಡುತ್ತಿದ್ದ. ನೀವು ತನ್ನ ಸಂಗಡ ಬರಬೇಕು ಇಲ್ಲದಿದ್ದರೆ ನಿಮ್ಮ ಪೋಟೊಗಳನ್ನು ಎಂ.ಎಂ.ಎಸ್ ಮೂಲಕ ಎಲ್ಲರಿಗೂ ಕಳುಹಿಸಿ ಅವಮಾನ ಮಾಡುತ್ತೇನೆಂದು ಹೆದರಿಸುತ್ತಾ ಸ್ನೇಹ ಬೆಳೆಸಲು ಪ್ರಯತ್ನಿಸಿ ಮೋಸ ಮಾಡುವ ಹವ್ಯಾಸ ಬೆಳೆಸಿಕೊಂಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಈತನು ಇದುವರೆವಿಗೂ ಪೀಣ್ಯ, ಗೊರಗುಂಟೆಪಾಳ್ಯ ಮತ್ತು ಯಶವಂತಪುರ ಮುಂತಾದ ಕಡೆ ಸುಮಾರು 10 ಜನ ಮಹಿಳೆಯರಿಗೆ (ಆಶಾ, ಉಷಾ, ಪ್ರೀತಿ, ಜಾನ್ಸಿ, ಮೇರಿ, ರಾಧಿಕಾ, ರಮ್ಯ, ಸುಮ, ಭೂಮಿಕಾ, ಮತ್ತು ಸೌಮ್ಯ ಹೆಸರು ಬದಲಾವಣೆ ಮಾಡಲಾಗಿದೆ.) ಈ ರೀತಿ ಬ್ಲಾಕ್ ಮೇಲ್ ಮಾಡಿದ್ದು ಅಲ್ಲದೆ, ಶಾಲಾ ಕಾಲೇಜುಗಳಿಗೆ ಹೋಗುವ ಹುಡುಗಿಯರ ಮೊಬೈಲ್ಗಳಿಗೂ ಸಹ ಇದೇ ರೀತಿ ಕರೆಗಳನ್ನು ಮಾಡುತ್ತಾ ಶಾಲಾ ಮಕ್ಕಳ ಮನಸ್ಸನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದು, ಈ ರೀತಿ ಬ್ಲಾಕ್ಮೇಲ್ ತಂತ್ರದಿಂದ ಒಬ್ಬ ಹೆಣ್ಣು ಮಗುವಿನ ಮದುವೆ ನಿಂತು ಹೋಗಿರುವುದು ಮೇಲ್ನೊಟಕ್ಕೆ ವಿಚಾರಣೆಯಿಂದ ಕಂಡು ಬಂದಿರುತ್ತದೆ.
ಈ ರೀತಿಯ ವಿಕೃತ ಮನಸ್ಸಿನ ಆರೋಪಿಯನ್ನು ದಸ್ತಗಿರಿ ಮಾಡಿರುವುದರಿಂದ ಅಮಾಯಕ ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ವಿಕೃತ ಮನಸ್ಸಿನ ವ್ಯಕ್ತಿಯ ಕಾಟದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುತ್ತಾರೆ. ಯಶವಂತಪುರ ಪೊಲೀಸರಿಗೆ ನಿಜಕ್ಕೂ ಥ್ಯಾಂಕ್ಸ್ ಹೇಳಲೇಬೇಕು. (ಒನ್ಇಂಡಿಯಾ ಕನ್ನಡ)