ಡಿಕೆಶಿಯಿಂದ ನಿತ್ಯಾಗೆ ಅಪಾರ ದೇಣಿಗೆ: ಯೋಗಿ

ಆದರೆ, ಸಚಿವ ಯೋಗೇಶ್ವರ್ ಅವರು ಈಗ ನಿತ್ಯಾನಂದನನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಅವರನ್ನು ಟೀಕಿಸುತ್ತಿದ್ದಾರೆ.
ಡಿಕೆ ಶಿವಕುಮಾರ್ ಅವರು ಸ್ವಾಮಿ ನಿತ್ಯಾನಂದನ ಪ್ರಮುಖ ಭಕ್ತರಲ್ಲಿ ಒಬ್ಬರು. ಬಿಡದಿ ಆಶ್ರಮ ಹಾಗೂ ನಿತ್ಯಾನಂದ ಖರ್ಚು ವೆಚ್ಚಗಳಿಗೆ ಡಿಕೆಶಿ ನೀಡಿರುವ ದಾನದ ದುಡ್ಡೇ ಆಧಾರ. ನಿಯಮಿತವಾಗಿ ಧ್ಯಾನಪೀಠಂಗೆ ದೇಣಿಗೆ ನೀಡುತ್ತಾ ಬಂದಿದ್ದಾರೆ.
ನಿತ್ಯಾನಂದನಿಗೆ 10 ಲಕ್ಷ ರು. ದೇಣಿಗೆ ನೀಡಿರುವುದಕ್ಕೆ ನನ್ನ ಬಳಿ ವಿಡಿಯೋ ಸಾಕ್ಷಿ ಇದೆ. ಧ್ಯಾನಪೀಠಂ ಜೊತೆ ನಿರಂತರವಾಗಿ ಒಡನಾಟ ಹೊಂದಿದ್ದ ಡಿಕೆ ಶಿವಕುಮಾರ್ ಅವರು ಎಷ್ಟು ದೇಣಿಗೆ ನೀಡಿದ್ದಾರೆ, ಯಾವ ಯಾವ ರೀತಿ ಸಹಾಯ ಮಾಡಿದ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ ಎಂದು ಯೋಗೇಶ್ವರ್ ಹೇಳಿದ್ದಾರೆ.
ನನಗೆ ನಿತ್ಯಾನಂದನ ಸಂಪರ್ಕವಿಲ್ಲ: ಬಿಡದಿ ಆಶ್ರಮದಲ್ಲಿ ಗಲಾಟೆ ನಡೆದ ನಂತರ ನಾಪತ್ತೆಯಾಗಿದ್ದ ನಿತ್ಯಾನಂದನನ್ನು ನಾನು ಸಂಪರ್ಕಿಸಿದ್ದೆ ಎಂದು ಸುದ್ದಿ ಹಬ್ಬಿದೆ. ಅದೆಲ್ಲವೂ ಶುದ್ಧ ಸುಳ್ಳು.
ಅಸಲಿಗೆ ಆ ಸ್ವಾಮೀಜಿಯನ್ನು ನಾನು ಮುಖತಃ ಭೇಟಿ ಮಾಡೇ ಇಲ್ಲ. ಬಿಡದಿ ಆಶ್ರಮದ ವಿವಾದ ಉಲ್ಬಣಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಪೊಲೀಸ್ ಅಧಿಕಾರಿ ಅನುಪಮ್ ಅಗರ್ವಾಲ್ ಅವರ ಜೊತೆ ಈಗಲ್ಟನ್ ರೆಸಾರ್ಟ್ ನಲ್ಲಿ ಚರ್ಚೆ ನಡೆಸಿದ್ದು ನಿಜ.
ನಿತ್ಯಾನಂದನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸದ್ಯಕ್ಕೆ ಪ್ರಕರಣ ಕೋರ್ಟಿನಲ್ಲಿರುವುದರಿಂದ ಕೋರ್ಟ್ ಆದೇಶಕ್ಕೆ ಅನುಸಾರವಾಗಿ ನಮ್ಮ ಪೊಲೀಸರ ತನಿಖೆ ಮುಂದುವರೆಯಲಿದೆ. ನಿತ್ಯಾನಂದನ ಮೇಲೆ ಕ್ರಮ ಜರುಗಿಸುವಲ್ಲಿ ಸರ್ಕಾರಕ್ಕೆ ಯಾವುದೇ ಹಿಂಜರಿಕೆ ಇಲ್ಲ ಎಂದು ಯೋಗೇಶ್ವರ್ ಪುನರುಚ್ಚರಿಸಿದ್ದಾರೆ.
ಚನ್ನಪಟ್ಟಣದ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಿತ್ಯಾನಂದನನ್ನು ಇರಿಸಲಾಗಿತ್ತು, ಗುರುವಾರ ಮಧ್ಯಾಹ್ನ ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಯೋಗೇಶ್ವರ್ ಹೇಳಿದ್ದಾರೆ.
ರಾಮನಗರ ಜಿಲ್ಲಾ ಪೊಲೀಸರು ಬಿಡದಿ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 143(ಕಾನೂನು ಬಾಹಿರವಾಗಿ ಗುಂಪು ಕಟ್ಟುವುದು), ಸೆಕ್ಷನ್ 341(ನಿರ್ಬಂಧಿತ ಪ್ರದೇಶದಲ್ಲಿ ಪ್ರವೇಶ), ಸೆಕ್ಷನ್ 323(ಸ್ವಯಂ ಹಾನಿ), 504(ಶಾಂತಿ ಭಂಗ) 506(ಪ್ರಾಣ ಭಯ) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಎಲ್ಲವೂ ಕಾಗ್ನಿಜೇಬಲ್ ಅಪರಾಧವಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆಯಬಹುದಾಗಿದೆ.












Click it and Unblock the Notifications