ರಾಜ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ಬರ?
Department of personnel and administrative reforms ವೆಬ್ ತಾಣದ ಮಾಹಿತಿ ಪ್ರಕಾರ ಕರ್ನಾಟಕಕ್ಕೆ ಕೇಂದ್ರದಿಂದ 299 ಐಎಎಸ್ ಅಧಿಕಾರಿಗಳ ಮಂಜೂರು ನೀಡಲಾಗಿತ್ತು. ಇದರಲ್ಲಿ ಸರ್ಕಾರ 249 ಅಧಿಕಾರಿಗಳನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿತ್ತು.
ಇದೇ ರೀತಿ ರಾಜ್ಯಕ್ಕೆ 205 ಐಪಿಎಸ್ ಅಧಿಕಾರಿಗಳನ್ನು ಕೇಂದ್ರದಿಂದ ನೀಡಲಾಗಿದೆ. ಇದರಲ್ಲಿ 157 ಅಧಿಕಾರಿಗಳು ಮಾತ್ರ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಹಿರಿಯ ಐಎಎಸ್ ಅಧಿಕಾರಿಗಳಾದ ಕೆ ಜೈರಾಜ್, ಎಸ್ ಎಂ ಜಾಮ್ದಾರ್, ಕೆ ಜ್ಯೋತಿರಾಮಲಿಂಗಂ ನಿವೃತ್ತಿ ಹೊಂದಲಿದ್ದಾರೆ.
ವರ್ಷಾಂತ್ಯಕ್ಕೆ ರಾಘವನ್ ಸುರೇಶ್, ಅಶೋಕ್ಕುಮಾರ್ ಸಿ ಮನೋಲಿ, ಐಆರ್ ಪೆರುಮಾಳ್, ಕೆಎಚ್ ಗೋಪಾಲಕೃಷ್ಣ ಗೌಡ, ಸೈಯದ್ ಜಮೀರ್ ಪಾಷಾ, ಕೆಆರ್ ಶಶಿಧರ, ಎನ್ ಶ್ರೀ ರಾಮನ್ ಮತ್ತು ಜಿ ರಾಮಚಂದ್ರ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.
ಐಪಿಎಸ್ ಅಧಿಕಾರಿಗಳು: ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆ ಮೇಲೆ ಕಣ್ಣಿಟ್ಟಿರುವ ಶಂಕರ್ ಬಿದರಿ ಹಾಗೂ ಹಂಗಾಮಿ ಡಿಜಿಪಿ ಎಆರ್ ಇನ್ಫ್ಯಾಂಟ್ ಹಾಗೂ ಜಿ ಎಂ ಹಯಾತ್, ಜೀವನ್ಕುಮಾರ್ ವಿ ಗಾಂವ್ಕರ್, ಯು ನಿಸಾರ್ ಅಹಮದ್ ಮತ್ತು ಎಂ ಸಿ ನಾರಾಯಣಗೌಡ ಕರ್ತವ್ಯ ವಷಾಂತ್ಯಕ್ಕೆ ಮುಗಿಯಲಿದೆ.
ಯುಪಿಎಸ್ ಸಿ ನಿಯಮಗಳ ಪ್ರಕಾರ, ಸೇವೆಯಿಂದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ನಿವೃತ್ತಿ ಹೊಂದುತ್ತಿದ್ದಂತೆ ಕೇಂದ್ರ ಸರ್ಕಾರ ಆಯಾ ರಾಜ್ಯಸರ್ಕಾರಗಳ ಜತೆ ಸಮಾಲೋಚನೆ ನಡೆಸಿ ಅಧಿಕಾರಿಗಳನ್ನು ಮಂಜೂರಾತಿ ಮಾಡಬೇಕು.
ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರವೂ ಸಾಮಾನ್ಯವಾಗಿ ವರ್ಷಕ್ಕೆ ಕನಿಷ್ಠ 10 ರಿಂದ 12 ಐಎಎಸ್ ಅಧಿಕಾರಿಗಳು ಹಾಗೂ ಇದೇ ಪ್ರಮಾಣದಲ್ಲಿ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸುವುದು ರೂಢಿಯಲ್ಲಿದೆ.
ಆದರೆ, ಇದೆಲ್ಲವೂ ಆಗುವುದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಇದ್ದಾಗ ಮಾತ್ರ. ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಕೋರಿಕೆ ಮೇರೆಗೆ ತ್ವರಿತವಾಗಿ ಅಧಿಕಾರಿಗಳನ್ನು ನಿಯೋಜಿಸಿದ ನಿದರ್ಶನಗಳಿದೆ.
ದೇಶದಲ್ಲಿ ಒಟ್ಟು 3100 ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಕೊರತೆಯನ್ನು ಕೇಂದ್ರ ಸರ್ಕಾರ ಎದುರಿಸುತ್ತಿದೆ. ಆದರೂ ಯುಪಿಎಸ್ಸಿ ಮೂಲಕ ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿಲ್ಲ.