ಆಭರಣ ಕಳ್ಳ ಶ್ರೀಧರ ಸೆರೆ, 9.5 ಕೆಜಿ ಚಿನ್ನ ವಶ
ಬಂಧಿತ ಶ್ರೀಧರನ ಬಳಿ ಇದ್ದ ಸುಮಾರು 9.5 ಕೆಜಿ ಚಿನ್ನಾಭರಣ, ಸಾವಿರಾರು ರುಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಸುಮಾರು 12ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಶ್ರೀಧರ ಇಲ್ಲಿವರೆಗೂ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ.
ಶ್ರೀಧರನ ಕಳ್ಳತನದ ಬಗ್ಗೆ ವಿವರಗಳು, ಕದ್ದ ಮಾಲು ಗಳ ವಿವರಗಳನ್ನು ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ಇವತ್ತಿನ ಚಿನ್ನದ ಬೆಲೆ ಹೀಗಿದೆ : 24K ಚಿನ್ನ 29,300.00, 22K ಚಿನ್ನ 26,950.00 ರು
ಶ್ರೀಧರ ಕದ್ದ ಮಾಲನ್ನು ಪೊಲೀಸ್ ಇಲಾಖೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ದೂರು ಆಧಾರಿಸಿ, ಚಿನ್ನ ಕಳೆದುಕೊಂಡವರಿಗೆ ಅವರ ಮಾಲುಗಳನ್ನು ವಿತರಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಚಾಲಾಕಿ ಕಳ್ಳನ ಕಥೆ : ಜಿ ಶ್ರೀಧರ್ ಅಲಿಯಾಸ್ ಅನಿಲ್ ಕುಮಾರ್ ಅಲಿಯಾಸ್ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಜೀವನ್ ಭೀಮಾ ನಗರ, ಹಲಸೂರಿನ ವರುಣ್ ಜ್ಯುವೆಲ್ಲರ್ಸ್, ಇಂದಿರಾನಗರ, ಎಚ್ ಎಎಲ್ ಸೇರಿದಂತೆ 14 ಕಡೆ ಕಳವು ಪ್ರಕರಣಗಳಲ್ಲಿ ಶ್ರೀಧರ ಹೆಸರು ದಾಖಲಾಗಿದೆ. ಸುಮಾರು 2.50 ಕೋಟಿ ರು.ಗೂ ಅಧಿಕ ಹಣ ಕದ್ದಿರುವ ಚಾಲಾಕಿ ಕಳ್ಳ ಶ್ರೀಧರ್ ಏಕಾಂಗಿಯಾಗಿ ಕಬ್ಬಿಣ ರಾಡ್ ಹಿಡಿದು ಕಳ್ಳತನಕ್ಕೆ ಇಳಿಯುತ್ತಿದ್ದ.
ಕದ್ದ ಮಾಲನ್ನು ಗಿರವಿ ಇಡುತ್ತಿದ್ದ. ಮಿಕ್ಕಿದ್ದನ್ನು ಇಷ್ಟಬಂದಾಗ ಧರಿಸಿಕೊಂಡು ಖುಷಿಪಡುತ್ತಿದ್ದ. ನಗರದ ಹಲವೆಡೆ ಬಾಡಿಗೆ ಮನೆ ಮಾಡಿಕೊಂಡು ಉಳಿದುಕೊಂಡಿದ್ದ ಶ್ರೀಧರ, ಎಲ್ಲೂ ಒಂದು ವರ್ಷಕ್ಕಿಂತ ಅಧಿಕ ಕಾಲ ಇರುತ್ತಿರಲಿಲ್ಲ.
ಜಯನಗರ, ಹೊಸಕೊಟೆ, ದೇವನಹಳ್ಳಿ, ರಾಮಮೂರ್ತಿ ನಗರ ಅಲ್ಲದೆ ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ. ಐದಾರು ವರ್ಷ ಜೈಲುವಾಸ ಅನುಭವಿಸಿ, ಹೊರ ಬಂದ ನಂತರ ಮತ್ತೆ ತನ್ನ ಕಸುಬು ಮುಂದುವರೆಸಿದ.
ಪೂರ್ವ ವಿಭಾಗದ ಡಿಸಿಪಿ ಕೃಷ್ಣಭಟ್ ನೇತೃತ್ವದಲ್ಲಿ ಎಸಿಪಿ ನರಸಿಂಹಯ್ಯ, ಜೆಬಿ ನಗರ ಠಾನೆ ಇನ್ಸ್ ಪೆಕ್ಟರ್ ಅಶೋಕ್, ಸಬ್ ಇನ್ಸ್ ಪೆಕ್ಟರ್ ಚಂದ್ರಪ್ಪ, ಗುರುಪ್ರಸಾದ್, ಎಎಸ್ ಐ ದೇಶ್ ಮುಖ್ ಮುಂತಾದ ಸಿಬ್ಬಂದಿಗಳ ತಂಡ ಆರೋಪಿ ಶ್ರೀಧರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಸುದ್ದಿಗೋಷ್ಥಿಯಲ್ಲಿ ವಿವರಿಸಿದರು.