ಪತಿಗೆ ಸೆಕ್ಸ್ ನಿರಾಕರಣೆ ಡೈವೋರ್ಸ್ಗೆ ಹಾದಿ

ಸೆಕ್ಸ್ ನಿರಾಕರಿಸಿ, ಪತ್ನಿ ನೀಡುತ್ತಿರುವ ಸಬೂಬುಗಳಿಂದ ಬೇಸತ್ತ ಪತಿಯೊಬ್ಬರು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅದು ಕ್ರೌರ್ಯ ಅಲ್ಲವೆಂದಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಎನ್.ಕೆ. ಪಾಟೀಲ್ ಹಾಗೂ ಬಿ.ವಿ. ಪಿಂಟೋ ಅವರ ವಿಭಾಗೀಯ ಪೀಠ ರದ್ದು ಮಾಡಿ, ಪತಿಗೆ ವಿಚ್ಛೇದನ ದೊರಕಿಸಿಕೊಟ್ಟಿದೆ.
'ನಾನು ಪತಿಯ ಜೊತೆ ನೆಲೆಸಲು ಇಚ್ಛಿಸುತ್ತೇನೆ' ಎಂದು ಕೋರ್ಟ್ ಮುಂದೆ ಹೇಳಿದರೂ ಅದನ್ನು ಮಾನ್ಯ ಮಾಡದ ನ್ಯಾಯಾಲಯ ಪತಿಯನ್ನು ಪತ್ನಿಯಿಂದ ಬಿಡುಗಡೆಗೊಳಿಸಿದೆ.
'ಲೈಂಗಿಕ ಸಂಪರ್ಕ ವಿವಾಹದ ಒಂದು ಪ್ರಮುಖ ಅಂಶ. ದೈಹಿಕ ಹಿಂಸೆಯಷ್ಟೇ ಕ್ರೂರತನ ಆಗಲಾರದು. ಆದರೂ ವಿನಾಕಾರಣ ಅದನ್ನು ನಿರಾಕರಿಸುವುದು ಸಲ್ಲದು. ವಿವಾಹ ಕಾಯ್ದೆಯಲ್ಲಿ ಕ್ರೌರ್ಯ ಕುರಿತು ಸ್ಪಷ್ಟ ವ್ಯಾಖ್ಯಾನ ಇಲ್ಲ. ಆದರೂ ವೈವಾಹಿಕ ಜೀವನವನ್ನು ಗಣನೆಗೆ ತೆಗೆದುಕೊಂಡಾಗ ಲೈಂಗಿಕ ಸಂಪರ್ಕ ಅಗತ್ಯ' ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಹತ್ತು ವರ್ಷದಿಂದ ದಂಪತಿ ಮಧ್ಯೆ ಲೈಂಗಿಕ ಸಂಪರ್ಕ ಇರಲಿಲ್ಲ: ಚೆನ್ನೈ ಮೂಲದ ಶ್ರವಣಕುಮಾರ್ ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿಯ ಮಾಲಾ (ಹೆಸರು ಬದಲಿಸಲಾಗಿದೆ) ದಂಪತಿ ನಡುವಿನ ಪ್ರಕರಣ ಇದಾಗಿತ್ತು. ಶ್ರವಣಕುಮಾರ್ ಚೆನ್ನೈ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದರೆ, ಮಾಲಾ ಜೀವ ವಿಮಾ ನಿಗಮದ ದಾವಣಗೆರೆ ಶಾಖೆಯಲ್ಲಿನ ಉದ್ಯೋಗಿ.
ಇವರ ವಿವಾಹ 2002ನೇ ಸಾಲಿನಲ್ಲಿ ನಡೆದಿತ್ತು. ವಿವಾಹವಾದ ಆರಂಭದಿಂದಲೂ ಇಬ್ಬರ ನಡುವೆ ಲೈಂಗಿಕ ಸಂಪರ್ಕ ಇರಲಿಲ್ಲ. ಮಧುಚಂದ್ರಕ್ಕೆ ಹೋದರೆ, ಅಲ್ಲಿಯೂ ದಂಪತಿ ಒಟ್ಟಿಗೆ ಇರಲಿಲ್ಲ. ಚೆನ್ನೈನಲ್ಲಿ ಇರುವ ಪತಿಯ ಮನೆಗೆ ಹೋಗುತ್ತಿದ್ದರೂ ಲೈಂಗಿಕ ಕ್ರಿಯೆಯಲ್ಲಿ ಆಕೆ ಆಸಕ್ತಿ ತೋರುತ್ತಿರಲಿಲ್ಲ. ಚೆನ್ನೈಗೆ ವರ್ಗಾವಣೆ ಮಾಡಿಕೊಳ್ಳಲು ಅವರಿಗೆ ಅವಕಾಶ ಇದ್ದರೂ ಅದಕ್ಕೂ ಪ್ರಯತ್ನಿಸಲಿಲ್ಲ.
'ಅತ್ತೆ, ಮಾವ ಹಾಗೂ ನಾದಿನಿ ಇವರೆಲ್ಲರೂ ಪತಿಯ ಜೊತೆ ಇರಬಾರದು' ಎನ್ನುವುದು ಮಾಲಾ ಬೇಡಿಕೆಯಾಗಿತ್ತು. ಅದಕ್ಕೆ ಶ್ರವಣಕುಮಾರ್ ಒಪ್ಪಿರಲಿಲ್ಲ. ಈ ಮಧ್ಯೆ, ಅತ್ತೆ ಹಾಗೂ ಇತರರ ವಿರುದ್ಧ ಮಾಲಾ 'ಕೌಟುಂಬಿಕ ದೌರ್ಜನ್ಯ ಕಾಯ್ದೆ' ಅಡಿ ದೂರು ದಾಖಲಿಸಿದರು. ಇದರಿಂದ ಬೇಸತ್ತ ಶ್ರವಣಕುಮಾರ್, 2005ನೇ ಸಾಲಿನಲ್ಲಿ ವಿಚ್ಛೇದನಕ್ಕೆ ಕೋರಿ ಕೌಟುಂಬಿಕ ಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications