ಸಚಿವ ತಂಡಗಳನ್ನು ಬರ ಕೇಂದ್ರಗಳಿಗೆ ಅಟ್ಟಿದ ಸಿಎಂ
ವಿಧಾನಸೌಧದಲ್ಲಿ ಮಂಗಳವಾರ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ರಾಜ್ಯದಲ್ಲಿನ ಬರ ಪೀಡಿತ ಪ್ರದೇಶಗಳಲ್ಲಿನ ಪರಿಹಾರ ಕಾಮಗಾರಿ ಪರಿಶೀಲನೆಗೆ ಸಚಿವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಸಚಿವ ಜಗದೀಶ್ ಶೆಟ್ಟರ್, ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೈರಾಜ್ ಸೇರಿದಂತೆ ಹಲವು ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ವಿಧಾನ ಮಂಡಲದಲ್ಲಿ ಪ್ರತಿಪಕ್ಷಗಳು ಆರೋಪಿಸಿದ್ದಕ್ಕೂ ವಾಸ್ತವ ಪರಿಸ್ಥಿತಿಗೂ ಅಜಗಜಾಂತರವಿದೆ. ಬರ ಪೀಡಿತ ಜಿಲ್ಲೆಗಳಲ್ಲಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ವಿಡಿಯೋ ಕಾನ್ಫರೆನ್ಸ್ನಿಂದ ತಿಳಿದಿದೆ ಎಂದ ಅವರು, ಬರದ ಕಾರಣಕ್ಕೆ ಜನ ಸಾಮಾನ್ಯರು ಗುಳೆ ಹೋಗುತ್ತಿಲ್ಲ ಎಂದು ಸಿಎಂ ಸದಾನಂದ ಗೌಡ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಗಳು ರಾಜ್ಯದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಿದ್ದಾರೆ. ಕುಡಿಯುವ ನೀರಿನ ಪಂಪ್ಸೆಟ್ಗೆ ವಿದ್ಯುತ್ ಕೊರತೆ ಕಂಡು ಬಂದರೆ ಇನ್ನೂ ಎರಡು ತಿಂಗಳು ಡಿಸೇಲ್ ಜನರೇಟರ್ ಬಳಕೆ ಮಾಡಲು ಸೂಚಿಸಿದ್ದು, ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಹಣಕಾಸಿನ ತೊಂದರೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಉದ್ಯೋಗ ಖಾತ್ರಿಯಲ್ಲಿನ ಕೂಲಿ ಬಾಕಿ ಹಣ ಬಿಡುಗಡೆಗೆ ಕೇಂದ್ರಕ್ಕೆ ಶೀಘ್ರದಲ್ಲೇ ನಿಯೋಗ ಕರೆದೊಯ್ಯುವುದಾಗಿ ಹೇಳಿದ ಅವರು, ಈ ಸಂಬಂಧದ ರಾಜ್ಯದ ಪಾಲನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದ ಸಿಎಂ, ಭವಿಷ್ಯದಲ್ಲಿ ಬರ ಪರಿಸ್ಥಿತಿಯ ನಿರ್ವಹಣೆ ದೃಷ್ಟಿಯಿಂದ ಪರಿಹಾರ ಕಾಮಗಾರಿ ಕೈಗೊಳ್ಳಬೇಕಾಗಿದೆ ಎಂದರು.