ನಾಗವೇಣಿ ಹಂತಕಿ ಸೈನೈಡ್ ಮಲ್ಲಿಕಾಗೆ ಗಲ್ಲುಶಿಕ್ಷೆ
ಯಲಹಂಕ ಬಳಿಯ ಅಲ್ಲಾಳಸಂದ್ರ ನಿವಾಸಿ ನಾಗವೇಣಿ (35) ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ. 2007ರ ಡಿ. 15ರಂದು ನಡೆದ ಮುನಿಯಮ್ಮ ಎಂಬುವರ ಕೊಲೆ ಪ್ರಕರಣದಲ್ಲಿಯೂ ತುಮಕೂರು ಸೆಷನ್ಸ್ ನ್ಯಾಯಾಲಯ ಮಲ್ಲಿಕಾಗೆ 2009ರಲ್ಲೇ ಗಲ್ಲುಶಿಕ್ಷೆ ಪ್ರಕಟಿಸಿದೆ.
ನಾಗವೇಣಿ ಕೊಲೆ ಪ್ರಕರಣ ಸಂಬಂಧ, ಕಲಾಸಿಪಾಳ್ಯ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಎಸ್.ಕೆ. ಉಮೇಶ್ (ಪ್ರಸ್ತುತ ಜಯನಗರ ಠಾಣೆ) ಅವರು 2007ರ ಡಿ. 26ರಂದು ಮಲ್ಲಿಕಾಳನ್ನು ನಗರದ ಕಗ್ಗಲಿಪುರದ ಬಳಿ ಬಂಧಿಸಿದ್ದರು. ನಂತರ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದರು. Serial Killer Cyanide Mallika ಒಟ್ಟು ಒಂಬತ್ತು ಮಹಿಳೆಯರ ಹತ್ಯೆ ಮಾಡಿದ್ದಾಳೆ. ಎಲ್ಲ ಪ್ರಕರಣಗಳಲ್ಲೂ ಪೊಟಾಶಿಯಂ ಸೈನೈಡ್ ಬಳಸಿ ಕೊಲೆ ಮಾಡಿದ್ದಳು ಎಂಬುದು ವಿಶೇಷ.
ಪ್ರಕರಣದ ಹಿನ್ನೆಲೆ: ವಿವಾಹಿತರಾಗಿದ್ದ ನಾಗವೇಣಿಗೆ ಮಕ್ಕಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಡಲ ಪೂಜೆ ಮಾಡಿದರೆ ಮಕ್ಕಳಾಗುತ್ತವೆ ಎಂದು ನಾಗವೇಣಿಗೆ ಮಲ್ಲಿಕಾ ನಂಬಿಸಿ, 2007ರ ಡಿ. 18ರಂದು ದೊಡ್ಡಬಳ್ಳಾಪುರ ಸಮೀಪದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರೆದೊಯ್ದಿದ್ದಳು. ಅವರಿಬ್ಬರೂ ದೇವಸ್ಥಾನ ಸಮೀಪದ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದ ವೇಳೆ ಮಲ್ಲಿಕಾ, ನೀರಿನಲ್ಲಿ ಸೈನೈಡ್ ಬೆರೆಸಿ ಅದನ್ನು ನಾಗವೇಣಿಗೆ ಕುಡಿಸಿ, ಕೊಲೆ ಮಾಡಿದ್ದಳು. ಬಳಿಕ ಅವರ ಆಭರಣಗಳನ್ನು ದೋಚಿ ಪರಾರಿಯಾಗಿದ್ದಳು.