ಸರ್ಕಾರದಲ್ಲಿ ಸಮಸ್ಯೆ ಇದೆ: ಸದಾಗೆ ಯಡ್ಡಿ ಟಾಂಗ್

ನಾನು ಐದು ವರ್ಷ ಮುಖ್ಯಮಂತ್ರಿಯಾಗುತ್ತೇನೆ ಎಂದುಕೊಂಡಿದ್ದೆ. ಲಕ್ಷ ಕೋಟಿ ರೂ. ಬಜೆಟ್ ಮಂಡಿಸುತ್ತೇನೆ ಎಂದುಕೊಂಡಿದ್ದೆ. ಆಗಲಿಲ್ಲ. ಈಗ ಲಕ್ಷ ಕೋಟಿ ರೂ. ಬಜೆಟ್ ಮಂಡನೆಯಾಗಿದೆ. ಸಂತೋಷ. ಆದರೆ ಬಜೆಟ್ ಮಂಡನೆಯಾದರೆ ಸಾಲದು, ಅನುಷ್ಠಾನ ಮುಖ್ಯ ಎಂದು ಚುಚ್ಚಿದರು.
ನನ್ನ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಅಥವಾ ಇನ್ಯಾವುದೇ ಸರ್ಕಾರ ಅದಲು-ಬದಲು ಮಾಡುವ, ಜನರಿಗೆ ನೀಡಿದ್ದ ಸೌಲಭ್ಯ ಕಿತ್ತುಕೊಳ್ಳುವ ದುಸ್ಸಾಹಸಕ್ಕೆ ಪ್ರಯತ್ನಿಸಿದರೆ ಅವರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಯಡಿಯೂರಪ್ಪ ಶಪಥ ಮಾಡಿದರು.
ಅಧಿಕಾರ ಇಲ್ಲದ ಏಳು ತಿಂಗಳ ಜೀವನದಲ್ಲಿ ಸಾಕಷ್ಟು ಅನುಭವ ಪಡೆದಿದ್ದೇನೆ. ನಂಬಿಕೆ, ವಿಶ್ವಾಸ ದ್ರೋಹಗಳನ್ನು ಹತ್ತಿರದಿಂದ ಕಂಡು, ಪಾಠ ಕಲಿತಿದ್ದೇನೆ. ಇನ್ನು ಮುಂದೆ ನಾನು ಬದಲಾಗುವ ಅಗತ್ಯವಿದೆ. ಬದಲಾಗಬೇಕು, ಬದಲಾಗಿಯೇ ಆಗುತ್ತೇನೆ. ಎಚ್ಚರಿಕೆಯಿಂದ ಇರುತ್ತೇನೆ ಎಂದು ಹೇಳಿದರು.
ಅಧಿಕಾರವಿಲ್ಲದೆ ಅಧಿಕಾರಕ್ಕಾಗಿ ರಾಜ್ಯ ಪ್ರವಾಸಕ್ಕೆ ಅಣಿ: ಯಡಿಯೂರಪ್ಪ ಆಣಿಮುತ್ತುಗಳು ಹೀಗಿವೆ- ಇಡೀ ರಾಜ್ಯಾದಾದ್ಯಂತ ಪ್ರವಾಸ ಮಾಡುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಅವರು ಹೇಳಿದರು. ಮುಖ್ಯಮಂತ್ರಿಯಾಗಿದ್ದಾಗ ಬೆಳಗ್ಗೆ ನಾಲ್ಕು ಗಂಟೆಗೆ ಏಳುತ್ತಿದ್ದೆ. ಇದೀಗ ಮೂರುವರೆಗೆ ಏಳುತ್ತಿದ್ದೇನೆ. ಮುಂದಿನ ಕಾರ್ಯತಂತ್ರಗಳ ಕುರಿತು ಯೋಚಿಸುತ್ತಿದ್ದೇನೆ. ಕುರ್ಚಿ (ಸಿಎಂ ಹುದ್ದೆ) ಸಿಕ್ಕರೆ ಉಪಯೋಗ ಮಾಡಿಕೊಳ್ಳುತ್ತೇನೆ. ಸಿಗದಿದ್ದರೆ, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವುದಕ್ಕಾಗಿ ನಿರಂತರವಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಬರಗಾಲ ಇದೆ. ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ, ಜನರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಿದೆ. ಅದಕ್ಕೆ ಜನ ಯಡಿಯೂರಪ್ಪ ಅವರನ್ನೇ ಬರುವಂತೆ ಒತ್ತಾಯಿಸುತ್ತಿದ್ದಾರೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಈಗ ಮುಂದುವರಿದಿದ್ದರೆ ರಾಜ್ಯ ದೇಶದಲ್ಲೇ ನಂಬರ್ 1 ಸ್ಥಾನ ಪಡೆಯುತ್ತಿತ್ತು. ಪಡ್ಯಂತ್ರದಿಂದ ಅವರನ್ನು ಜೈಲಿಗೆ ಕಳುಹಿಸಲಾಯಿತು ಎಂದು ಆರೋಪಿಸಿದರು.
ವಿರೋಧಿಗಳೇ ಎಚ್ಚರ!: 'ರಾಜಕಾರಣದಲ್ಲಿ ಯಾರನ್ನಾದರೂ ಸುಲಭವಾಗಿ ತೊಡೆದು ಹಾಕಬಹುದು ಎನ್ನುವ ಭಾವನೆಯಿದ್ದವರು ಅದನ್ನು ಇನ್ನಾದರೂ ಬಿಡಲಿ' ಎನ್ನುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪನವರ ವಿರೋಧಿಗಳಿಗೆ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಎಚ್ಚರಿಕೆ ನೀಡಿದರು. 'ಯಡಿಯೂರಪ್ಪನವರಿಗೆ ಅಧಿಕಾರವಿಲ್ಲದಿದ್ದರೂ ಅವರ ಹಿಂದೆ 70 ಶಾಸಕರು, 15 ವಿಧಾನ ಪರಿಷತ್ ಸದಸ್ಯರು, 14 ಸಂಸದರು ಇದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ಶಕ್ತಿಯನ್ನು ಪಕ್ಷದ ವರಿಷ್ಟರಿಗೆ ತಿಳಿಸಿದರು' ಎಂದೂ ಲೋಕೋಪಯೋಗಿ ಸಚಿವರು ಘರ್ಜಿಸಿದರು.












Click it and Unblock the Notifications