ಬಿಕ್ಕಟ್ಟು ಬಗೆಹರಿಯುವವರೆಗೆ ಬಜೆಟ್ ಮುಂದೂಡಿಕೆ?
ಬಜೆಟ್ ಅಧಿವೇಶನ ಮಾ.20ರಿಂದ ಆರಂಭವಾಗುತ್ತಿದ್ದು, ಮಾ.30ರವರೆಗೆ ನಡೆಯಲಿದೆ. ಈ ದಿನಗಳಲ್ಲಿ ಯಾವತ್ತಾದರೂ ಬಜೆಟ್ ಮಂಡನೆಯಾಗಬಹುದು. ಬಜೆಟ್ ತಮ್ಮಿಂದ ಅಥವಾ ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಜಗದೀಶ್ ಶೆಟ್ಟರ್ ಅವರಿಂದಲೇ ಮಂಡನೆಯಾಗಬೇಕು ಎಂದು ಯಡಿಯೂರಪ್ಪ ಬಲವಾಗಿ ಪಟ್ಟುಹಿಡಿದಿದ್ದಾರೆ.
ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಹಠಹಿಡಿದವರ ಟೋಳಿ ತುಮಕೂರು ರಸ್ತೆಯಲ್ಲಿರುವ ಗೋಲ್ಡನ್ ಪಾಮ್ಸ್ ರೆಸಾರ್ಟಿನಲ್ಲಿ ಬೀಡುಬಿಟ್ಟಿದೆ. ಅವರನ್ನು ಬೆಂಬಲಿಸುತ್ತಿರುವ ಬಿಜೆಪಿ ಶಾಸಕರು ದೆಹಲಿಯಲ್ಲಿ ಮತ್ತೊಂದು ಸಭೆ ನಡೆಸಿದ್ದಾರೆ. ಇಲ್ಲಿ ಬೆಂಗಳೂರಿನಲ್ಲಿ ಸದಾನಂದ ಗೌಡರನ್ನು ಬೆಂಬಲಿಸುತ್ತಿರುವವರ ಬಣ ಬಗ್ಗುವ ಸಂಕೇತ ತೋರಿಸುತ್ತಿಲ್ಲ.
ಈ ಎಲ್ಲ ಬೆಳವಣಿಗೆಗಳನ್ನು ಬೇರೆ ಬೇರೆ ಊರಿನಲ್ಲಿ ನಾನಾ ಚಟುವಟಿಕೆಗಳಲ್ಲಿ ನಿರತರಾಗಿರುವ ಬಿಜೆಪಿ ಹೈಕಮಾಂಡ್ ಸದಸ್ಯರು ಗಮನಿಸುತ್ತಿದ್ದು, ಅಲ್ಲಲ್ಲಿಂದಲೇ ಅವರವರಿಗೆ ತೋಚಿದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾವು ಸಾಯುತ್ತಿಲ್ಲ ಕೋಲು ಕೂಡ ಮುರಿಯುತ್ತಿಲ್ಲ ಎಂಬಂತಹ ಪರಿಸ್ಥಿತಿ ಕರ್ನಾಟಕ ರಾಜಕೀಯದಲ್ಲಿ ತಲೆದೋರಿದೆ.
ಈ ನಡುವೆ, ಸದಾನಂದ ಗೌಡ ಮತ್ತು ಈಶ್ವರಪ್ಪ ಅವರು ಬಿಜೆಪಿ ಕಚೇರಿಗೆ ಧಾವಿಸಿದ್ದು, ಆರ್ಎಸ್ಎಸ್ ಮುಖಂಡರಾದ ಸತೀಶ್ ಮತ್ತು ಸಂತೋಷ್ ಅವರೊಂದಿಗೆ ಭಿನ್ನಮತದ ಬಿಕ್ಕಟ್ಟು ಪರಿಹರಿಸುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ಬೆಂಬಲಿಸಿ ವೀರಶೈವ ಮಠಾಧಿಪತಿಗಳು ಮತ್ತು ಸದಾನಂದ ಗೌಡರನ್ನು ಬೆಂಬಲಿಸಿ ಒಕ್ಕಲಿಗ ಮಠಾಧಿಪತಿಗಳು ಹೇಳಿಕೆ ನೀಡುತ್ತಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಇದೇ ಸಂದರ್ಭದಲ್ಲಿ, ಎರಡೂ ಬಣದವರೊಡನೆ ಗುರುತಿಸಿಕೊಂಡಿರದಿದ್ದ ಕರುಣಾಕರ ರೆಡ್ಡಿ ಅವರು ಗೋಲ್ಡನ್ ಪಾಮ್ಸ್ ರೆಸಾರ್ಟಿಗೆ ಧಾವಿಸಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ. ಹಿಂದೆ ಇದೇ ರೆಡ್ಡಿ ಬ್ರದರ್ಸ್ ಯಡಿಯೂರಪ್ಪ ವಿರುದ್ಧ ಶಾಸಕರನ್ನು ಎತ್ತಿಕಟ್ಟಿದ್ದರು. ಆಗ ಅವರ ಹಿಂದೆ ಜಗದೀಶ್ ಶೆಟ್ಟರ್ ಸಾಗಿದ್ದರು. ಯಡಿಯೂರಪ್ಪನೂ ಬೇಡ, ಸದಾನಂದರೂ ಬೇಡ ತಮ್ಮ ಜೊತೆ ಬನ್ನಿ ಎಂದು ಶೆಟ್ಟರನ್ನು ಮತ್ತೆ ಸೆಳೆಯಲು ರೆಡ್ಡಿಗಳು ಯತ್ನಿಸುತ್ತಿದ್ದಾರೆಯೆ? ಕಾದು ನೋಡಬೇಕು.