ಹಲ್ಲುಕಿತ್ತ ಹಾವಿನಂತಾಗಿರುವ ಬಿಜೆಪಿ ಹೈಕಮಾಂಡ್
ಬಿಜೆಪಿ ಹೈಕಮಾಂಡನ್ನು ಹಲ್ಲುಕಿತ್ತ ಹಾವಿಗೆ ಹೋಲಿಸದೆ ಬೇರೆ ವಿಧಿಯೇ ಇಲ್ಲ. ಬಿಜೆಪಿಯಲ್ಲಿ ಅಧಿಕಾರಕ್ಕೆ ಗುದ್ದಾಟ ನಡೆದಿರುವುದು ಇದೇ ಮೊದಲಲ್ಲ. ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಅರಾಜಕತೆ ಏಳುತ್ತಲೇ ಇದೆ. ಆದರೆ, ಹೈಕಮಾಂಡ್ ಮಾತ್ರ ಸಂದರ್ಭಕ್ಕೆ ತಕ್ಕಂತಹ ಪರಿಹಾರ ಹುಡುಕುತ್ತಿದೆಯೇ ಹೊರತು ಶಾಶ್ವತ ಪರಿಹಾರಕ್ಕೆ ಯಾವತ್ತೂ ಯತ್ನಿಸಿಲ್ಲ.
ಪ್ರತಿ ಬಾರಿ ಅವರನ್ನು ಇವರು ಇಳಿಸಲು, ಇವರನ್ನು ಅವರು ಕಿತ್ತುಬಿಸಾಕಲು ಗದ್ದಲ ಎಬ್ಬಿಸಿದಾಗಲೆಲ್ಲ, ಬಿಕ್ಕಟ್ಟು ಶಮನಕ್ಕೆ ಬರುವ ದಿಲ್ಲಿಯ ಹಿರಿಯ ನಾಯಕರೆಲ್ಲ ಮೈಸೂರು ಪೇಟ ತೊಡಿಸಿಕೊಂಡು, ಶಾಲು ಹೊದಿಸಿಕೊಂಡು ಸನ್ಮಾನ ಮಾಡಿಸಿಕೊಂಡು ಹೋದರೆ ಮತ್ತೆ ಬರುವುದು ಮತ್ತೊಂದು ಬಿಕ್ಕಟ್ಟು ಉದ್ಭವಿಸಿದಾಗಲೆ.
ಭಿನ್ನಮತವನ್ನು ಚಿಗುರಿನಲ್ಲೇ ಚಿವುಟಿ ಹಾಕಲು ವಿಫಲವಾಗಿದ್ದರಿಂದ ಈಗ ಬಿಜೆಪಿ ಬಿಕ್ಕಟ್ಟು ಆಲದಮರವಾಗಿ ಬೆಳೆದು ನಿಂತಿದೆ. ಅನೇಕ ಬಿಳಲುಗಳು ಭದ್ರವಾಗಿ ನೆಲಸೇರಿಕೊಂಡುಬಿಟ್ಟಿವೆ. ಭಿನ್ನಮತವೆಂಬ ಆಲದ ಬಿಳಲನ್ನು ಎಲ್ಲಿಂದ ಕತ್ತರಿಸಿಕೊಂಡು ಬರುವುದು? ಆಲದ ಮರವನ್ನೇ ಕತ್ತರಿಸಿಹಾಕಿಬಿಡುವುದಾ? ಬಿಜೆಪಿ ಹೈಕಮಾಂಡಿಗೆ ಅದೂ ಸಾಧ್ಯವಿಲ್ಲ.
ರೆಡ್ಡಿಗಳು ಯಡಿಯೂರಪ್ಪ ವಿರುದ್ಧ ಶಾಸಕರನ್ನು ಹೈದರಾಬಾದಿಗೆ ಹೈಜಾಕ್ ಮಾಡಿದಾಗ, ಯಡಿಯೂಪ್ಪ ವಿರುದ್ಧ ಭಿನ್ನಮತ ಭುಗಿಲೆದ್ದು ಗೋವಾದಲ್ಲಿ ರಾಜಕೀಯ ರಾಮಾಯಣ ನಡೆದಾಗ, ಯಡಿಯೂರಪ್ಪ ಅಕ್ರಮ ಗಣಿಗಾರಿಕೆಯಲ್ಲಿ ಸಿಕ್ಕುಬಿದ್ದು ಅಧಿಕಾರ ಬಿಟ್ಟುಕೊಡಲು ತಂಟೆ ತೆಗೆದಾಗ, ಅಧಿಕಾರ ಬಿಟ್ಟು ಆರು ತಿಂಗಳ ನಂತರ ಮುಖ್ಯಮಂತ್ರಿ ಗದ್ದುಗೆ ಬೇಕೆಂದು ಯಡಿಯೂರಪ್ಪ ಕ್ಯಾತೆ ತೆಗೆದಾಗಲೆಲ್ಲ ಬಿಜೆಪಿ ಹೈಕಮಾಂಡ್ ಭಿನ್ನಮತವನ್ನು ಹೆಡೆಮುರಿಗೆ ಕಟ್ಟಲು ಸಂಪೂರ್ಣ ವಿಫಲವಾಗಿದೆ.
ಈಗ, ಐದು ವರ್ಷದ ಆಡಳಿತ ಮುಗಿಸಲು ಇನ್ನೂ ಒಂದು ವರ್ಷವಿರುವಾಗಲೇ ಯಡಿಯೂರಪ್ಪ 55 ಶಾಸಕರನ್ನು ಹೈಜಾಕ್ ಮಾಡಿಕೊಂಡು ತುಮಕೂರು ರಸ್ತೆಯಲ್ಲಿರುವ ಗೋಲ್ಡನ್ ಪಾಮ್ ರೆಸಾರ್ಟಿನಲ್ಲಿ ಮುಖ್ಯಮಂತ್ರಿ ಗದ್ದುಗೆ ಪಡೆಯಲೆಂದು ತಪಸ್ಸಿಗೆ ಕುಳಿತುಬಿಟ್ಟಿದ್ದಾರೆ. ಈಗಲಾದರೂ ಬಿಜೆಪಿ ಹೈಕಮಾಂಡ್ ಹಲ್ಲಿರುವ ಹಾವಿನಂತೆ ವರ್ತಿಸುವುದಾ? ಕಚ್ಚದಿದ್ದರೆ ಅತ್ತಾಗಿರಲಿ, ಕನಿಷ್ಠಪಕ್ಷ ಬುಸ್ ಅಂತಾದರೂ ಅನ್ನುವುದಾ? ಯಡಿಯೂರಪ್ಪನವರನ್ನೇ ಮತ್ತೆ ಮುಖ್ಯಮಂತ್ರಿ ಮಾಡಬೇಕು, ಇಲ್ಲದಿದ್ದರೆ ಅವರನ್ನು ಪಕ್ಷಬಿಟ್ಟು ಹೊರಡುವಂತೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಡೌಟ್.