ದಕ್ಷಿಣಭಾರತದ ಜನತೆಗೆ ಇಂದಿನಿಂದ ಗ್ಯಾಸ್ ಟ್ರಬಲ್ ಶುರು
ಈ ಬಗ್ಗೆ ದಕ್ಷಿಣ ವಲಯ ಮೋಟರ್ ಟ್ರಾನ್ಸ್ಪೋರ್ಟರ್ ವೆಲ್ಫೇರ್ ಅಸೋಷಿಯೇಷನ್ ಪ್ರಧಾನ ಕಾರ್ಯದರ್ಶಿ ಷಣ್ಮುಗಪ್ಪ ಮಾತನಾಡಿ, ಬುಧವಾರ ಮಧ್ಯರಾತ್ರಿಯಿಂದ ಮಂಗಳೂರು ಬಂದರಿನಿಂದ ಅಡುಗೆ ಅನಿಲ ಸರಬರಾಜು ಮಾಡುವ ಸುಮಾರು 3600ಕ್ಕೂ ಹೆಚ್ಚು ಟ್ಯಾಂಕರ್ ಲಾರಿಗಳು ಸಾಗಣೆ ಸ್ಥಗಿತಗೊಳಿಸಲಿವೆ. ಹಾಗಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಅಡುಗೆ ಅನಿಲ ಸರಬರಾಜು ಆಗುವುದಿಲ್ಲ. ಕರ್ನಾಟಕಕ್ಕೆ ನಮ್ಮ ಲಾರಿಗಳು ಪ್ರತಿದಿನ ಸುಮಾರು 10 ಸಾವಿರ ಟನ್ ಗ್ಯಾಸ್ ಸರಬರಾಜು ಮಾಡುತ್ತಿವೆ. ನಮ್ಮ ಬೇಡಿಕೆಗಳು ಈಡೇರುವ ತನಕ ಮುಷ್ಕರ ಕೈಬಿಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಲಾರಿ ಮಾಲೀಕರ ಈ ಮುಷ್ಕರದಿಂದಾಗಿ ತೊಂದರೆ ಸೃಷ್ಟಿಯಾಗುವ ಸಾದ್ಯತೆ ದಟ್ಟವಾಗಿದೆ. ನಗರದಲ್ಲಿ ಅಡುಗೆ ಅನಿಲ ವಿತರಿಸುವ ಇಂಡಿಯನ್ ಆಯಿಲ್, ಎಚ್ಪಿ ಮತ್ತು ಭಾರತ್ ಗ್ಯಾಸ್ ಕಂಪನಿ ತಲಾ ಒಂದೊಂದು ಶೇಖರಣೆ ಮತ್ತು ರೀಫಿಲ್ಲಿಂಗ್ ಘಟಕಗಳನ್ನು ಹೊಂದಿವೆ.
ಇಂಡಿಯನ್ ಗ್ಯಾಸ್ ಕಂಪನಿ ಮಾಲೂರಿನ ದೇವನಗುಂಡಿಯಲ್ಲಿ ತನ್ನ ಘಟಕ ಹೊಂದಿದ್ದರೆ, ಹಿಂದುಸ್ತಾನ್ ಪೆಟ್ರೋಲಿಯಂ ಮಹದೇವಪುರದಲ್ಲಿ ಮತ್ತು ಭಾರತ್ ಗ್ಯಾಸ್ ನೆಲಮಂಗಲದಲ್ಲಿ ಸಂಗ್ರಹಣಾ ಘಟಕ ಹೊಂದಿವೆ. ಅದರಲ್ಲಿ ಭಾರತ್ ಮತ್ತು ಎಚ್ಪಿ ಸಂಪೂರ್ಣವಾಗಿ ರಸ್ತೆಯನ್ನೇ ಅವಲಂಬಿಸಿಕೊಂಡಿದೆ. ಐಓಸಿ ಮಾತ್ರ ಅಡುಗೆ ಅನಿಲ ಸರಬಾರಾಜಿಗೆ ರೈಲನ್ನು ಹೆಚ್ಚು ಅವಲಂಬಿಸಿಕೊಂಡಿದೆ. ಹೀಗಾಗಿ, ಲಾರಿ ಮುಷ್ಕರ ಎಚ್ಪಿ ಮತ್ತು ಭಾರತ್ ಗ್ಯಾಸ್ ಕಂಪನಿ ಗ್ರಾಹಕರನ್ನು ಹೆಚ್ಚು ಬಾಧಿಸಲಿವೆ.