ನ್ಯಾ.ಸೈನಿ ತೀರ್ಪು: ಚಿದುಗೆ ಏನು ಆಪತ್ತು ಕಾದಿದೆಯೋ?
ಇದೇ ವೇಳೆ ನ್ಯಾ ಸೈನಿ ಚಿದು ವಿರುದ್ಧವಾಗಿ ತೀರ್ಪು ನೀಡಿದರೆ ನಿಜಕ್ಕೂ ಆಪತ್ತು ಕಾದಿದೆ. ಚಿದು ಸಚಿವ ಸ್ಥಾನಕ್ಕೆ ಕುತ್ತು ಬರಲಿದೆ. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಾಕಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಕೇಂದ್ರ ಸರಕಾರದ ಮಟ್ಟದಲ್ಲಿ ವಿಪರೀತ ಏರುಪೇರುಗಳಾಗಲಿವೆ. ಜಾಗತೀಕರಣಗೊಂಡಿರುವ ಭಾರತದ ಅರ್ಥ ವ್ಯವಸ್ಥೆಯಲ್ಲಿ ಇಂತಹ ತಲ್ಲಣಗಳು, ಪಲ್ಲಟಗಳು ಘಟಿಸುವುದನ್ನು ಜಗತ್ತು ಸಹ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಜನತಾ ಪಕ್ಷದ ನೇತಾರ, ಹಿರಿಯ ನ್ಯಾಯವಾದಿ ಸುಬ್ರಹ್ಮಣಿಯನ್ ಸ್ವಾಮಿ ಅವರು ನ್ಯಾ ಸೈನಿ ಎದುರು ವಾದ ಮಂಡಿಸುತ್ತಾ, 2ಜಿ ಹಗರಣದಲ್ಲಿ ಚಿದಂಬರಂ ಕೈವಾಡ ಇರುವುದು ಮೇಲ್ನೋಟಕ್ಕೇ ದೃಢಪಟ್ಟಿದೆ ಎಂದಿದ್ದರು. ಅಷ್ಟಕ್ಕೇ ಸುಮ್ಮನಾಗದೆ ಸಾಕಷ್ಟು ದಾಖಲೆ ಪತ್ರಗಳನ್ನೂ ಸಾಕ್ಷಿಯಾಗಿ ಒದಗಿಸಿದ್ದಾರೆ. ಕಳೆದ ತಿಂಗಳು 21ಕ್ಕೆ ವಿಚಾರಣೆ ಪೂರ್ಣಗೊಳಿಸಿ, ನ್ಯಾ ಸೈನಿ ಅವರು ತೀರ್ಪನ್ನು ಫೆ. 4ಕ್ಕೆ ಕಾಯ್ದಿರಿಸಿದ್ದರು. ಸೋ. ನ್ಯಾ ಸೈನಿ ಜಡ್ಜ್ ಮೆಂಟ್ ಏನಾಗುತ್ತದೋ ಎಂಬುದನ್ನು ಇಡೀ ಜಗತ್ತು ಕಾದುನೋಡುತ್ತಿದೆ. ಚಿದಂಬರಂ ಸಹ.