ಕೋರ್ಟ್ ತೀರ್ಪು:ಪಳನಿಯಪ್ಪನ್ ಚಿದಂಬರಂ ಬಚಾವು

2ಜಿ ಹಗರಣದಲ್ಲಿ ಚಿದಂಬರಂ ಪಾತ್ರದ ಕುರಿತು ವಿಚಾರಣಾ ನ್ಯಾಯಾಲಯವೇ ತೀರ್ಪು ನೀಡುವುದು ಒಳಿತು ಎಂದು ಸುಪ್ರೀಮ್ ಕೋರ್ಟ್ ಉತ್ತಮ ವಿವೇಚನೆಯಿಂದ ಹೇಳಿದೆಯಾದರೂ ಅದರ ಜತೆ ಜತೆಗೆ ನ್ಯಾ ಸೈನಿ ನೀಡಬಹುದಾದ ತೀರ್ಪಿನ ಬಗ್ಗೆಯೂ ಕಾಮೆಂಟ್ ಮಾಡಿದೆ. ಅಷ್ಟೇ ಅಲ್ಲ. ಪ್ರಧಾನಿ ಸಿಂಗ್ ಆಗಲಿ ಅಥವಾ ಗೃಹ ಸಚಿವ ಚಿದಂಬರಂ ಅವರನ್ನಾಗಲಿ ಹಗರಣಕ್ಕೆ ಹೊಣೆಯಾಗಿಸಲಾಗದು ಎಂದೂ ಸುಪ್ರೀಂ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಅಭಿಪ್ರಾಯವೇ ಹೀಗಿರುವಾಗ ಅಧೀನ ನ್ಯಾಯಾಧೀಶ ನ್ಯಾ ಸೂನಿ ಅವರು ತಾನೇ ಏನು ಹೇಳಿಯಾರು!? ಕುತೂಹಲದ ಸಂಗತಿಯೆಂದರೆ ಸುಪ್ರೀಂ ನ್ಯಾಯಪೀಠಕ್ಕೆ ತನ್ನ ತೀರ್ಪು ಅಧೀನ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬುದು ಅರಿವೆಗೆ ಬಂದಿದೆ. ಅದಕ್ಕೆ ತಕ್ಷಣ ಚಿದಂಬರಂ ವಿಚಾರಣೆ ಕುರಿತು ನಿರ್ಧರಿಸುವ ವೇಳೆ ಸುಪ್ರೀಂಕೋರ್ಟ್ ತೀರ್ಪಿನಿಂದ ಪ್ರಭಾವಿತವಾಗದಂತೆಯೂ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಸಲಹೆ ನೀಡಿದ್ದಾರೆ!
ನ್ಯಾ ಸೈನಿ ಅವರೂ ಸುಪ್ರೀಮ್ ಕೋರ್ಟಿನಿಂದ ಇಂತಹುದನ್ನು ಬಯಸಿದ್ದರು ಎಂದು ಕಾಣುತ್ತದೆ. ಅದಕ್ಕೇ ಸ್ವಾಮಿ ಅರ್ಜಿ ವಿಚಾರಣೆಯನ್ನು 21ಕ್ಕೆ ಪೂರ್ಣಗೊಳಿಸಿದ್ದರೂ ತೀರ್ಪನ್ನು ಫೆ. 4ಕ್ಕೆ ಕಾಯ್ದಿರಿಸಿದ್ದರು. ಏಕೆಂದರೆ ಫೆ. 2ಕ್ಕೆ ಸುಪ್ರೀಮ್ ಕೋರ್ಟ್ ಮಹತ್ವದ ತೀರ್ಪು ನೀಡುವುದು ನಿಕ್ಕಿಯಾಗಿತ್ತು. ಹಾಗೆಂದ ಮಾತ್ರಕ್ಕೆ ಸುಪ್ರೀಮ್ ಕೊರ್ಟ್ ತೀರ್ಪಿನಲ್ಲಿ ಹುಳುಕು ಕಾಣುವ ಪ್ರಯತ್ನ ಇದಲ್ಲ. ಆದರೂ ಪರೋಕ್ಷವಾಗಿ ಏನು ಪ್ರಭಾವ ಬೀರಲಿದೆಯೋ ಎಂಬ ಆತಂಕ ಮನೆ ಮಾಡಿದೆ ಎನ್ನುತ್ತಾರೆ ಬೆಂಗಳೂರಿನ ನುರಿತ ವಕೀಲರೊಬ್ಬರು.
ಸೋ, ನ್ಯಾ ಸೈನಿ ಅವರು ಎಷ್ಟರ ಮಟ್ಟಿಗೆ ಪ್ರಭಾವಿತರಾಗುತ್ತಾರೆ ಎಂಬುದಕ್ಕೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.












Click it and Unblock the Notifications