ಇಂದು ಯಡಿಯೂರಪ್ಪಗೆ ಮಹತ್ವದ ದಿನ:ಆರೆಸ್ಸೆಸ್ ಬೈಠಕ್

ಮೊದಲು, ಯಡಿಯೂರಪ್ಪಗೆ ಸಮನ್ಸ್ ಕುರಿತು ಹೈಕೋರ್ಟ್ ತೀರ್ಪು ನೀಡಲಿದೆ. ಅಲ್ಲಿ ತೀರ್ಪು ಏನಾಗಲಿದೆಯೋ 'ನೋಡಿಕೊಂಡು' ಸಂಜೆ ವೇಳೆಗೆ ಬಿಜೆಪಿ ಮತ್ತು ಸಂಘ ಪರಿವಾರದ ಹಿರಿಯ ನಾಯಕರು ಬೈಠಕ್ ನಡೆಸಲಿದ್ದಾರೆ. ಆಡಳಿತಾರೂಢ ಬಿಜೆಪಿಯಲ್ಲಿ ಉದ್ಭವಿಸಿರುವ ನಾಯಕತ್ವ ಗೊಂದಲ ಮತ್ತು ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಯಲಿದೆ.
ಯಡಿಯೂರಪ್ಪ-ಈಶ್ವರಪ್ಪ ಮುಖಾಮುಖಿ: ಗಮನಾರ್ಹವೆಂದರೆ ಕೇಶವ ಕೃಪಾದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಯಡಿಯೂರಪ್ಪರಿಗೂ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಸದಾನಂದಗೌಡ ಮತ್ತು ರಾಜ್ಯಾಧ್ಯಕ್ಷ ಈಶ್ವರಪ್ಪ ಸಮ್ಮುಖದಲ್ಲಿ ಮುಕ್ತವಾಗಿ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಲು ಸಂಘ ಪರಿವಾರದ ಮುಖಂಡರು ನಿರ್ಧರಿಸಿದ್ದಾರೆ. ಅಲ್ಲಿಗೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಮುಖಾಮುಖಿಯಾಗುವುದು ನಿಶ್ಚಿತ.
ಆದರೆ, ಈ ಸಭೆಯಿಂದ ಏಕಾಏಕಿ ಬಿಜೆಪಿಯಲ್ಲಿನ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದೇನೂ ನಿಶ್ಚಿತವಾಗಿ ಹೇಳಲಾಗದು. ಈಶ್ವರಪ್ಪ ಬಗ್ಗೆ ಯಡಿಯೂರಪ್ಪ ನೀಡಿರುವ ಹೇಳಿಕೆ ಮತ್ತು ಸೂಕ್ತ ಸ್ಥಾನಮಾನಕ್ಕಾಗಿ ಯಡಿಯೂರಪ್ಪ ಬಣ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವಂತೂ ನಡೆಯಲಿದೆ.
ಈ ಮಧ್ಯೆ, 'ನಾನು ಬಿಜೆಪಿಯನ್ನು ತೊರೆಯುವ ಪ್ರಶ್ನೆಯೇ ಇಲ್ಲ. ಈ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ. ಪಕ್ಷವನ್ನು ಬಲಪಡಿಸಬೇಕು ಎಂಬ ಕಾರಣಕ್ಕಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದೇನೆ ಹೊರತು ಬೇರೆ ಉದ್ದೇಶವಿಲ್ಲ' ಎಂದು ಯಡಿಯೂರಪ್ಪ ಘಂಟಾಘೋಷವಾಗಿ ಹೇಳಿದ್ದಾರೆ.












Click it and Unblock the Notifications