ಅಶೋಕ್ ಭೂ ಹಗರಣ: ನಿವೇಶನ ಬಿಡಿಎಗೆ ವಾಪಸ್; ಕೇಸ್ ಖಲಾಸ್ ?
ಸದ್ಯೋಭವಿಷ್ಯತ್ತಿನಲ್ಲಿ ಅಕ್ರಮ ಡಿನೋಟಿಫಿಕೇಶನ್ ಭೂತ ಕಾಡುವ ಸುಳಿವನ್ನರಿತ ಸಚಿವ ಅಶೋಕ್ ತಕ್ಷಣವೇ ಸದರಿ ವಿವಾದಿತ ಭೂಮಿಯನ್ನು ಸಾಮಾಜಿಕ ಉಪಯೋಗಕ್ಕಾಗಿ ಬಳಸಿಕೊಳ್ಳುವಂತೆ ಕೋರಿ ಬಿಡಿಎ ಪತ್ರ ಬರೆದು ತಿಳಿಸಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಕೇಸ್ ನಿಂದ ನಾನು ಬಚಾವ್ ಎಂದು ಅಶೋಕ್ ಹೇಳಿದ್ದಾರೆ.
ಆದರೆ ... ಈ ಹಿಂದೆ ಹೀಗೇ ಭೂತಾರಾಧನೆಯಲ್ಲಿ ತೊಡಗಿದ್ದ ಅನೇಕ ಭೂತರಾಜರು ಕೋರ್ಟ್ ಕೆಂಗಣ್ಣಿಗೆ ಗುರಿಯಾಗುತ್ತಿದ್ದಂತೆ ತೆಪ್ಪಗೆ ಭೂಮಿಯನ್ನು ವಾಪಸ್ಸು ಮಾಡಿದರಾದರೂ ಒಬ್ಬರನ್ನು ಬಿಟ್ಟು ಎಲ್ಲರೂ ಜೈಲು ಸೇರಿಕೊಂಡರು. ಸೋ, ಈ ಲೆಕ್ಕಾಚಾರದಲ್ಲಿ ನೋಡಿದಾಗ ಅಶೋಕ್ ಸಹ ಭೂಮಿ ವಾಪಸ್ ಮಾಡಿದರೂ ಕೇಸಿನಿಂದ ಬಚಾವಾಗುವುದು ಕಷ್ಟ ಕಷ್ಟ ಎನ್ನಲಾಗಿದೆ. ನವೆಂಬರ್ 21ರವರೆಗೂ ಅಶೋಕ ಮಹಾರಾಜಗೆ ಶಾಂತಿಕಾಲ ಇದ್ದಂತಿದೆ.
ಇನ್ನೆಲ್ಲಿಯ ಕೇಸು!?: 'ಇನ್ನೆಲ್ಲಿಯ ವಿವಾದ!? ನಾನು ಎಂದೋ (2 ತಿಂಗಳ ಹಿಂದೆ) ಲೊಟ್ಟೆಗೊಲ್ಲಹಳ್ಳಿಯ ಬಿಇಎಲ್ ವೃತ್ತದಲ್ಲಿರುವ ವಿವಾದಿತ ಭೂಮಿಯನ್ನು ಸಾರ್ವಜನಿಕ ಬಳಕೆಗಾಗಿ ಬಿಡಿಎಗೆ ದಾನ ಮಾಡಿಬಿಟ್ಟೆ. ಅನಗತ್ಯವಾಗಿ ನಾನು ಇದರಲ್ಲಿ ಸಿಕ್ಕಿಹಾಕಿಕೊಂಡೆ' ಎಂದು ವಿಷಾದಛಾಯೆ ಹೊತ್ತು ಅಶೋಕ್ ಹೇಳಿದ್ದಾರೆ.