ಪರಪ್ಪನ ಅಗ್ರಹಾರ ಸೆರೆಮನೆಗೆ ಯಡಿಯೂರಪ್ಪ ಸೇರ್ಪಡೆ

ಮೂರು ವರ್ಷಗಳ ಸರ್ವಾಧಿಕಾರಿಯಂತೆ ಬಿಂದಾಸ್ ಆಗಿ ರಾಜ್ಯಭಾರ ಮಾಡಿದ್ದ ಯಡಿಯೂರಪ್ಪ ಸಾಮಾನ್ಯ ಕೈದಿಯಂತೆ ಪರಪ್ಪನ ಅಗ್ರಹಾರ ಸೇರಲಿದ್ದಾರೆ. ಕೋರ್ಟಿಗೆ ಹಾಜರಾದನಂತರ ಅವರನ್ನು ಅಕ್ಟೋಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ.
ಡಿವೈಎಸ್ಪಿ ಪ್ರಸನ್ನರಾಜು ಅವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸಕ್ಕೆ ಅರೆಸ್ಟ್ ವಾರಂಟ್ ಹಿಡಿದು ತೆರಳಿದಾಗ ಯಡಿಯೂರಪ್ಪ ಅಲ್ಲಿಂದ ನಾಪತ್ತೆಯಾಗಿದ್ದರು. ಅಲ್ಲಿಂದ ಪೊಲೀಸರು ಡಾಲರ್ಸ್ ಕಾಲೋನಿ ನಿವಾಸಕ್ಕೂ ತೆರಳಿ ಯಡಿಯೂರಪ್ಪಗಾಗಿ ಶೋಧ ನಡೆಸಿದ್ದರು. ಅಲ್ಲಿಯೂ ಅವರು ಸಿಕ್ಕಿರಲಿಲ್ಲ.
ಮನೆಯ ಹಿಂಬಾಗಿಲ ಮೂಲಕ ತಲೆತಪ್ಪಿಸಿಕೊಂಡಿದ್ದ ಯಡಿಯೂರಪ್ಪ, ಕೋರ್ಟಿಗೆ ಹಾಜರಾಗುವಾಗಲೂ ಕೂಡ ಎಲ್ಲ ಕಣ್ಣುತಪ್ಪಿಸಿ ನ್ಯಾಯಾಲಯದ ಹಿಂಬಾಗಿಲ ಮೂಲಕ ಶರಣಾಗಿದ್ದಾರೆ. ಇನ್ನು ಪರಪ್ಪನ ಅಗ್ರಹಾರಕ್ಕೆ ಕೂಡ ಹಿಂಬಾಗಿಲ ಮೂಲಕ ಜೈಲು ಹೋಗಲು ಯಡ್ಡಿ ಇಚ್ಛಿಸುತ್ತಾರಾ? ಆದರೇನು ಮಾಡುವುದು ಜೈಲಿಗೆ ಹಿಂಬಾಗಿಲಿಲ್ಲವಲ್ಲ!
ಬಲ್ಲ ಮೂಲಗಳ ಪ್ರಕಾರ, ಯಡಿಯೂರಪ್ಪನವರು ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿ ಜೈಲು ಸೇರಲು ಕೂಡ ಸೂಕ್ತ ಮುಹೂರ್ತ ತೆಗೆದಿದ್ದಾರೆ. ಜ್ಯೋತಿಷಿಗಳ ಅಣತಿಯಂತೆ ಸರಿಯಾಗಿ ಸಂಜೆ 4.45ಕ್ಕೆ ತಾವೇ ಸ್ವತಃ ನ್ಯಾಯಾಧೀಶರೆದಿರು ಹಾಜರಾಗಿದ್ದಾರೆ. ಇಂಥ ಮುಹೂರ್ತಕ್ಕೆ ಶರಣಾದರೆ ಮುಂದೆ ಒಳಿತಾಗುತ್ತದೆ ಎಂಬ ನಂಬಿಕೆ.
ಅವರು ಶರಣಾದಂಥ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯಾಲಯದೆದಿರು ಭಾರೀ ಜನಜಂಗುಳಿ ನೆರೆದಿತ್ತು. ಸಾರ್ವಜನಿಕರು, ರಾಜಕಾರಣಿಗಳು, ಮಾಧ್ಯಮದವರು, ಬಿಎಸ್ ವೈ ಬೆಂಬಲಿಗರು ನೆರೆದಿದ್ದರು. ಪೊಲೀಸರು ಜನರನ್ನು ನಿಯಂತ್ರಿಸಲು ವಿಶೇಷ ಭದ್ರತಾ ವ್ಯವಸ್ಥೆಯನ್ನೂ ಮಾಡಿದ್ದರು.












Click it and Unblock the Notifications