ಕೊಪ್ಪಳ: ಹೈ ಕಮಾಂಡ್ vs ಯಡಿಯೂರಪ್ಪ ಯುದ್ಧ
ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಈಗ ಚೇತರಿಸಿಕೊಂಡು ಮೇಲಕ್ಕೆದ್ದು ನಿಂತಿದ್ದರೂ ಚುನಾವಣೆ ನಾಯಕತ್ವ ವಹಿಸುವಂತಿಲ್ಲ. ಜಗದೀಶ್ ಶೆಟ್ಟರ್ ಎಂದಿದ್ದರೂ ಎರಡನೆ ಸಾಲಿನ ನಾಯಕ. ಹಾಲಿ ಸಿಎಂ ಸದಾನಂದ ಗೌಡರು ಒಲ್ಲದ ಮನಸ್ಸಿನಿಂದ ಕರಡಿ ಪಕ್ಕದಲ್ಲಿ ನಿಂತು ಕಿಸಕ್ಕನೆ ನಗುತ್ತಿದ್ದಾರೆ.
ಅಜೇಯ ವೀರನಿಗೆ ಮತ್ತೆ ಮಣೆ: ಹೈಕಮಾಂಡ್ ವಿರೋಧದ ನಡುವೆಯೂ ಕೊಪ್ಪಳಕ್ಕೆ ಬಂದು ಗವಿ ಸಿದ್ದೇಶ್ವರ, ಮಲೆ ಮಲ್ಲೇಶ್ವರ ಗುಡಿಗೆ ತೆರಳಿ ಕೈ ಮುಗಿದು ಬಂದಿರುವ ಬಿಎಸ್ ಯಡಿಯೂರಪ್ಪ ಅವರು ಕರಡಿ ಅವರನ್ನು ಗೆಲ್ಲಿಸಲು ಸಂಕಲ್ಪ ತೊಟ್ಟಿದ್ದಾರೆ.
ನನ್ನ ನೇತೃತ್ವದಲ್ಲಿ ಲೋಕಸಭೆ, ವಿಧಾನ ಸಭೆ, ನಗರಪಾಲಿಕೆ ಚುನಾವಣೆಯನ್ನು ಗೆದ್ದು ಸಿಹಿ ತಿಂದು ಸಂಭ್ರಮಿಸಿದ ಬಿಜೆಪಿ ವರಿಷ್ಠರು, ಕಷ್ಟಕಾಲದಲ್ಲಿ ನನ್ನ ಕೈ ಹಿಡಿಯಲಿಲ್ಲ ಎಂಬ ನೋವು ಯಡಿಯೂರಪ್ಪ ಅವರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಇದನ್ನು ಪ್ರಚಾರ ಸಮಾರಂಭದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಕೂಡಾ.
ಒಂದು ಕುಟುಂಬದಲ್ಲಿ ಅಣ್ಣ ತಮ್ಮಂದಿರಂತೆ ಇದ್ದ ನಮ್ಮನ್ನು ಅಕ್ರಮ ಗಣಿಗಾರಿಕೆ ವರದಿ ಹಾಳು ಮಾಡುಬಿಟ್ಟಿತು, ವರದಿಯನ್ನು ನಂಬಿಕೊಂಡು ಹೈಕಮಾಂಡ್ ಕ್ರಮ ಜರುಗಿಸಿದ್ದು ನೋವು ತಂದಿದೆ ಎಂದ ಯಡಿಯೂರಪ್ಪ ಕಣ್ಣಲ್ಲಿ ಹೈಕಮಾಂಡ್ ಪಾಠ ಕಲಿಸುವ ಚಾಲೆಂಜ್ ಕಾಣಿಸುತ್ತಿತ್ತು.
ಯಡಿಯೂರಪ್ಪ ಅವರನ್ನು ಮೂಲೆಗುಂಪಾಗಿಸಿ ಸಾಮೂಹಿಕ ನಾಯಕತ್ವದ ಪರ ನಿಂತಿರುವ ಬಿಜೆಪಿಗೆ ತನ್ನ ತಂತ್ರವೇ ಮುಳುವಾಗುವ ಸಾಧ್ಯತೆಯದೆ. ಯಡಿಯೂರಪ್ಪ ನೇತೃತ್ವದಲ್ಲಿ 1999. 2004 ಹಾಗೂ 2008ರಲ್ಲಿ ಬಿಜೆಪಿ ಕೀರ್ತಿ ಪಾತಕೆ ಹಾರಿಸಿದ ಯಡಿಯೂರಪ್ಪ ಮತ್ತೊಮ್ಮೆ ಈ ಆಂತರಂಗ, ಬಹಿರಂಗ ಸಮರ ಗೆಲ್ಲುತ್ತಾರಾ? ಸೆ.26 ರ ನಂತರ ಉತ್ತರ ದೊರೆಯಲಿದೆ.