ರೆಡ್ಡಿ ಬಂಧನ: ಕಾಳಹಸ್ತಿಯಲ್ಲಿ ಭಾವನ ಮನೆಯೂ ಶೋಧ
ಸಿಬಿಐ ಜಾಲಾಡಿತ್ತು ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ಅಂದಹಾಗೆ, ಜನಾರ್ದನ ರೆಡ್ಡಿ ಅವರ ಭಾವ, ನಿವೃತ್ತ ಶಿಕ್ಷಕ ಸುಧಾಕರ ರೆಡ್ಡಿ ಈ ಪಟ್ಟಣದಲ್ಲಿ ವಾಸವಾಗಿದ್ದಾರೆ. ಇಲ್ಲಿನ ಮದ್ರಾಸ್ ರಸ್ತೆಯಲ್ಲಿರುವ ಸುಧಾಕರ್ ನಿವಾಸದ ಮೇಲೆ ಸೋಮವಾರ ಬೆಳಗ್ಗೆ ಸಿಬಿಐ ದಾಳಿ ಮಾಡಿತ್ತು. ಆದರೆ ಅಲ್ಲಿ ಯಾರೂ, ಏನೂ ಸಿಬಿಐ ಅಧಿಕಾರಿಗಳಿಗೆ ದೊರಕಲಿಲ್ಲ.
ಅಷ್ಟಕ್ಕೂ ಜನಾರ್ದನ ರೆಡ್ಡಿ ಕುಟುಂಬ ಬಳ್ಳಾರಿಗೆ ವಲಸೆ ಹೋಗುವುದಕ್ಕೆ ಮೊದಲು ಈ ಪಟ್ಟಣದಲ್ಲಿಯೇ ವಾಸವಾಗಿತ್ತು. ಗಾಲಿ ಜನಾರ್ದನ ರೆಡ್ಡಿಯ ಹುಟ್ಟೂರು ಶ್ರೀಕಾಳಹಸ್ತಿ ಯೆರಪೇಡು ಮಂಡಲ ವ್ಯಾಪ್ತಿಯ ಎಂ.ಡಿ. ಪುತ್ತೂರು ಗ್ರಾಮ. ಬಳ್ಳಾರಿಗೆ ಹೋಗಿ, ದಿನಬೆಳಗಾಗುವುದರೊಳಗಾಗಿ ಶ್ರೀಮಂತರಾದರೂ ಜನಾ ರೆಡ್ಡಿ ತಮ್ಮ ಬೇರುಗಳನ್ನು ಮರೆತಿರಲಿಲ್ಲ. ತಪ್ಪದೇ ಹುಟ್ಟೂರಿಗೆ ಬರುತ್ತಿದ್ದರು.
ಮೂವರು ಸೋದರರು ಮತ್ತು ಒಬ್ಬ ಸೋದರಿಯ ನಂತರ ಹುಟ್ಟಿದ್ದು ಜನಾ ರೆಡ್ಡಿ. ಅವರ ತಂದೆ ಚಂಗಾ ರೆಡ್ಡಿ ಶ್ರೀಕಾಳಹಸ್ತಿ ಸಮೀಪ ಚಿತ್ತತ್ತೂರಿನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಪೊಲೀಸ್ ಸೇವೆಯಲ್ಲಿದ್ದರು. ಜನಾ ರೆಡ್ಡಿ ಅವರ ತಾಯಿ ಇದೇ ಗ್ರಾಮದವರು.
ತಮ್ಮ 20ನೇ ವಯಸ್ಸಿನಲ್ಲಿ ಕುಟುಂಬ ಸಮೇತ ಬಳ್ಳಾರಿಗೆ ಬಂದಿಳಿದಾಗ ಜನಾ ರೆಡ್ಡಿ ಆರಂಭದಲ್ಲಿ ಚಿಟ್ ಫಂಡ್ ಸಂಸ್ಥೆಯಲ್ಲಿ ಗುಮಾಸ್ತರರಾಗಿದ್ದರು. ಹೊಸಪೇಟೆಯಲ್ಲಿ ಒಂದಷ್ಟು ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತಿದ್ದರು.