ಹೇಮಾಮಾಲಿನಿ : ಕೊಟ್ಟ ಹೆಣ್ಣು ಕುಲದ ಹೊರಗೆ
ಡ್ರೀಮ್ ಗರ್ಲ್ ರಾಜ್ಯಸಭೆಗೆ ನಿರೀಕ್ಷೆಯಂತೆ ಆಯ್ಕೆಯಾದ ನಂತರ ರಾಜ್ಯದಲ್ಲಿ ನಡೆದ ರಾಜಕೀಯ ದೊಂಬರಾಟ ಒಂದಲ್ಲ ಎರಡಲ್ಲ. ಭಾರತೀಯ ಜನತಾ ಪಕ್ಷದ ಮಾನ ಮರ್ಯಾದೆಯನ್ನು ಯಾವುದೇ ಮುಲಾಜಿಲ್ಲದೆ ಮಾಜಿ ಸಿಎಂ ಹರಾಜಿಗೆ ಹಾಕಿದಾಗ ಮತ್ತು ಯಡ್ಡಿಯವರ ವರ್ತನೆ ನೋಡಿ ವರಿಷ್ಥರು ತಲೆ ಮೇಲೆ ಟವಲ್ ಹಾಕಿಕೊಂಡು ಕೂತಿದ್ದಾಗ ಹೇಮಾಮಾಲಿನಿ ಯಾವ ಶೂಟಿಂಗ್ ನಲ್ಲಿದ್ದರೋ ನಮಗೆ ತಿಳಿಯದು.
ಹೊಸ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಾಗಲಿ, ಯಡಿಯೂರಪ್ಪ ವಿಚಾರದಲ್ಲಾಗಲಿ ಪಕ್ಷ ಮುಖಭಂಗ ಅನುಭವಿಸುತ್ತಿರಬೇಕಾದರೆ ಯಾವ ಪಕ್ಷದಿಂದ ಆಯ್ಕೆಯಾಗಿದ್ದರೋ ಆ ಪಕ್ಷದ ಬೆಂಬಲಕ್ಕೂ ನಿಲ್ಲದ ಇವರಿಗೆ "ಎಂಪಿ" ಎನ್ನುವ ಗತ್ತು ಹೆಸರಿನ ಪಕ್ಕದಲ್ಲಿರಬೇಕು ಅಷ್ಟೇ. ಇನ್ನೂ ಪಕ್ಷಕ್ಕೂ ಅಷ್ಟೇ ಚುನಾವಣೆಯ ಸಮಯದಲ್ಲಿ ಸಾರ್ವಜನಿಕರನ್ನು ಆಕರ್ಷಿಸಲು ಒಂದು ಸೆಲೆಬ್ರಿಟಿ ಬೇಕಾಗಿರುತ್ತೋ ಹೊರತು ಇನ್ನೇನು ಅಲ್ಲ.
ರಾಜ್ಯದ ಬಗ್ಗೆ ದನಿಎತ್ತುವ ಮಾತಿರಲಿ, ಕಡೇ ಪಕ್ಷ ರಾಜ್ಯಸಭೆಯ ಕಲಾಪಗಳಲ್ಲಾದರೂ ಭಾಗವಹಿಸುತ್ತಿದ್ದಾರೋ ಅದೂ ಇಲ್ಲ, ಅಲ್ಲೂ ಹಾಜರಾತಿ ಕಮ್ಮಿ. ಆಯ್ಕೆಯಾದ ನಂತರ ರಾಜ್ಯಕ್ಕಾದರೂ ಬಂದರಾ? ಅದೂ ಇಲ್ಲ. ರಾಜ್ಯದ ಸಮಸ್ಯೆ, ಕೇಂದ್ರದಿಂದ ಬರಬೇಕಾದ ಅನುದಾನ, ಅನುಮೋದನೆ ಮುಂತಾದ ಎಲ್ಲಾ ಸಮಸ್ಯೆ ಇವರಿಗೆ ತಿಳಿದಿರುತ್ತದೆ ಎಂದು ನಾವು ಅಂದು ಕೊಂಡರೆ ನಾವೇ ಮೂರ್ಖರು.
ನಮ್ಮ ರಾಜ್ಯದ ಹಣೆ ಬರಹವೇ ಇಷ್ಟು, ಇಷ್ಟು ವರ್ಷದಿಂದ ರಾಜ್ಯದಿಂದ ಆಯ್ಕೆಯಾಗಿದ್ದಾರಲ್ಲಾ ಮಾನ್ಯ ವೆಂಕಯ್ಯ ನಾಯ್ದುಗಾರು ರಾಜ್ಯದ ಹಿತದೃಷ್ಟಿಯಿಂದ ಕಲಾಪದ ಚರ್ಚೆಯಲ್ಲಿ ಭಾಗವಹಿಸಿದ ಕೆಲವೇ ಉದಾಹರಣೆ ನೀಡಬಹುದೇ ಹೊರತು ಇವರಿಂದ ರಾಜಕ್ಕೆ ಯಾವ ಘನಂದಾರಿ ಕೆಲಸವಾಗಿಲ್ಲ. ಬೇಕಾದರೆ ಕರ್ನಾಟಕದ ನೆಲದಲ್ಲಿ ನಿಂತು ತೆಲುಗಿನಲ್ಲಿ ಭಾಷಣ ಗೈಯುತ್ತಾರೆ ಅಷ್ಟೇ. ಇನ್ನು ತಮಿಳುನಾಡಿನಿಂದ ಬಂದ ಉದ್ಯಮಿ ದೊರೆಸ್ವಾಮಿಯವರು ಜನತಾದಳದ ಬೆಂಬಲದಿಂದ ಆಯ್ಕೆಯಾಗಿದ್ದರು ಎನ್ನುವುದು ಬಹಳಷ್ಟು ಜನರಿಗೆ ಮರತೆ ಹೋಗಿರಬಹುದು.
ಇನ್ನಾದರೂ ಯಾವುದೇ ಪಕ್ಷ ಅಭ್ಯರ್ಥಿಗಳನ್ನು ಆರಿಸುವ ಮೊದಲು ರಾಜ್ಯದ ಬಗ್ಗೆ ಹೋರಾಟ ಮಾಡುವವರನ್ನು ಆರಿಸಲಿ ಎನ್ನುವುದು ನಮ್ಮ ಆಶಯ.