ಎನ್ಎಂಕೆಆರ್ವಿ ಕಾಲೇಜು ವಿರುದ್ಧ ವಿದ್ಯಾರ್ಥಿ ಪ್ರತಿಭಟನೆ
ಸುರಾನಾ ಕಾಲೇಜು, ವಿಜಯಾ ಕಾಂಪೋಸಿಟ್ ಕಾಲೇಜು, ಸಿಟಿ ಕಾಲೇಜು, ಜೈನ್ ಕಾಲೇಜು, ಜೆಎಸ್ಎಸ್ ಕಾಲೇಜು, ಬಾಲ್ಡವಿನ್ ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ಗುಡ್ ಬೈ ಹೇಳಿ ಸೋಮವಾರ ಅಣ್ಣಾ ಚಳವಳಿಗೆ ಧುಮುಕಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಮಾಡುತ್ತಿರುವ ವಿದ್ಯಾರ್ಥಿಗಳು ಚಳವಳಿಯಲ್ಲಿ ಭಾಗವಹಿಸದ ಕಾಲೇಜುಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಎನ್ಎಂಕೆಆರ್ವಿ ಕಾಲೇಜು ಆಡಳಿತವರ್ಗ ಎಂದಿನಂತೆ ತನ್ನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನವನ್ನು ಸೋಮವಾರ ಮುಂದುವರಿಸಿತ್ತು.
ಇದನ್ನು ವಿರೋಧಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜಿನ ಗೇಟು ಹಾರಿ, ಒಳನುಗ್ಗಿ ಪ್ರಿನ್ಸಿಪಾಲ್ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಕೂಗಿದರು. ಒಟ್ಟಿನಲ್ಲಿ ವಿದ್ಯಾರ್ಥಿಗಳು ಅಣ್ಣಾ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಎಲ್ಲಾ ಕಾಲೇಜುಗಳು ತಮ್ಮ ಚಳವಳಿಗೆ ಬೆಂಬಲ ಸೂಚಿಸಬೇಕೆಂಬ ಆಗ್ರಹವಾಗಿದೆ.
ಸಾವಿರ ಸಾವಿರ ಸಂಖ್ಯೆಯಲ್ಲಿ ಜಯನಗರದ ರಸ್ತೆಗಳ ಉದ್ದಕ್ಕೂ ತ್ರಿವರ್ಣ ಧ್ವಜ ಹಿಡಿದು ಅಲೆಯುತ್ತಿರುವ ಯುವಜನತೆಯ ಮೊದಲ ಕಾರ್ಯಕ್ರಮ ಇಂದು ಮಧ್ಯಾಹ್ನ ವಿಜಯಾ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಕಲೆತು ಭ್ರಷ್ಟಾಚಾರ ವಿರೋಧಿ ಅಣ್ಣಾ ಚಳವಳಿಗೆ ಬೆಂಬಲ ಸೂಚಿಸುವುದಾಗಿದೆ ಎಂದು ಸುರಾನಾ ಕಾಲೇಜಿನ ಅಜಿತ್ ದಟ್ಸ್ ಕನ್ನಡಕ್ಕೆ ತಿಳಿಸಿದರು.
ಮತ್ತೊಬ್ಬ ವಿದ್ಯಾರ್ಥಿನಿ ಸುಗುಣಾ ದಟ್ಸ್ ಕನ್ನಡದೊಂದಿಗೆ ಮಾತನಾಡುತ್ತ, ಹೊರಗಡೆ ಚಳವಳಿ, ಘೋಷಣೆಗಳನ್ನು ಕೂಗುತ್ತಿದ್ದರೆ ಒಳಗಡೆ ಪಾಠ ಕೇಳುವುದಾದರೂ ಹೇಗೆ? ಒಳಗಡೆ ಕುಳಿತಿದ್ದರೂ ಮನಸು ಮಾತ್ರ ಚಳವಳಿ ಕುರಿತೇ ಇರುತ್ತದೆ. ಆದ್ದರಿಂದ, ಚಳವಳಿ ಸೇರಲು ಕಾಲೇಜು ಮಂಡಳಿ ಅನುಮತಿ ನೀಡುವುದೇ ಒಳಿತು ಎಂದು ಅಭಿಪ್ರಾಯಪಟ್ಟರು.