ಡೆಲ್ ಉದ್ಯೋಗಿ ಪಾಯಲ್ ಕೊಲೆ ಕೇಸ್ ಸಿಬಿಐಗೆ
ನನ್ನ ಪತಿ ಅಮಾಯಕ, ಈ ಪ್ರಕರಣದಲ್ಲಿ ಅವರನ್ನು ಬಲಿಪಶು ಮಾಡಲಾಗಿದೆ, ಸಿಬಿಐ ತನಿಕೆ ನಂತರ ಸತ್ಯ ಹೊರಬೀಳಲಿದೆ. ಪಾಯಲ್ ಳನ್ನು ಜೇಮ್ಸ್ ಕೊಂದಿಲ್ಲ. ಜೆಪಿ ನಗರ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದರು ಎಂದು ಜೇಮ್ಸ್ ಪತ್ನಿ ಸ್ಮೃತಿರೇಖಾ ರೇ ಪ್ರತಿಕ್ರಿಯಿಸಿದ್ದಾರೆ.
ಪಾಯಲ್ ದುರಂತ ಸಾವಿನ ಕಥೆ: ಒಡಿಶಾ ಮೂಲದ ಜೇಮ್ಸ್ ರೇ, ಪಾಯಲ್ ಸುರೇಖಾಳ ಬಾಲ್ಯ ಸ್ನೇಹಿತ. ಅಲ್ಲದೇ ಆತ ಸುರೇಖಾರ ಪತಿ ಅನಂತ್ ನಾರಾಯಣ್ ಮಿಶ್ರಾಗೂ ಸ್ನೇಹಿತನಾಗಿದ್ದ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಜೇಮ್ಸ್ ಗೆ ಮಿಶ್ರಾ ಒಡೆತನದ ಜಿಮ್ ನಲ್ಲಿ ಕೆಲಸ ಕೊಡಿಸಿದ್ದ.
ಪಾಯಲ್ ಕುಟುಂಬದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಆತ ಸುರೇಖಾರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಪೂರ್ವಯೋಜಿತ ಸಂಚಿನಂತೆ ಆತ, ಮಿಶ್ರಾ ಅವರು ಒಡಿಶಾಗೆ ಹೋಗಿದ್ದ ಸಂದರ್ಭವನ್ನು ನೋಡಿಕೊಂಡು ಅವರ ಮನೆಗೆ ಬಂದು ಈ ಕೃತ್ಯ ಎಸಗಿದ್ದಾನೆ. ಪಾಯಲ್ ಸ್ತನ, ಗುಪ್ತಾಂಗಗಳ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಆದರೆ, ಪಾಯಲ್ ಮೇಲೆ ಅತ್ಯಾಚಾರ ಎಸೆಗಿಲ್ಲ ಎಂದು ಜೆಪಿ ನಗರ ಠಾಣೆ ಪೊಲೀಸರು ಕೊಲೆ ಕೇಸ್ ಕಥೆ ಹೇಳಿದ್ದರು.
ಮೊದಲಿಗೆ ಮಿಶ್ರಾ ಮೇಲೆ ಸಂಶಯ ಮೂಡಿತ್ತು, ನಂತರ ಜೇಮ್ಸ್ ಬಂಧಿಸಿ ವಿಚಾರಿಸಲಾಯಿತು. ಕೊಲೆ ಮಾಡಿರುವುದನ್ನು ಆತ ಒಪ್ಪಿಕೊಂಡ ಎಂದು ಜೆಪಿನಗರ ಪೊಲೀಸರು ಕೇಸ್ ಕಥೆ ಮುಗಿಸಿದ್ದರು. ಡೆಲ್ ಉದ್ಯೋಗಿಯಾಗಿದ್ದ ಪಾಯಲ್ ಸಾವಿನ ನಂತರ ಅನಂತ್ ಗೆ ವಿಮೆ ಹಣದ ರೂಪದಲ್ಲಿ 7 ಲಕ್ಷ ರು ಲಭಿಸಿದೆ. ಆದರೆ, ಪಾಯಲ್ ತಂದೆಗೆ ಇನ್ನೂ ಅನಂತ್ ಮೇಲೆ ಸಂಶಯವಿದೆ. ಎಲ್ಲದ್ದಕ್ಕೂ ಉತ್ತರ ಸಿಬಿಐ ತಂಡ ಜೆಪಿನಗರಕ್ಕೆ ಭೇಟಿ ಕೊಟ್ಟ ನಂತರವಷ್ಟೇ ತಿಳಿಯಲಿದೆ.