ಹಾಸನದಲ್ಲಿ ಹಾಲಿನ ಡೇರಿ ಕಟ್ಟಲು ವಿಪ್ರೊ ಕೆಲಸ ಬಿಟ್ಟರು...
ಗ್ರಾಹಕರು ಮತ್ತು ರೈತರಿಗೆ ಅನುಕೂಲವಂತೆ ಸುಮಾರು 24 ಎಕರೆ ಪ್ರದೇಶದಲ್ಲಿ 15 ಕೋಟಿ ರು. ವೆಚ್ಚದಲ್ಲಿ ಈ ಹಾಲಿನ ಡೇರಿ ನಿರ್ಮಿಸಲಾಗುತ್ತಿದೆ. ಹಾಲು ಕರೆಯುವ ಯಂತ್ರ, ದನಗಳ ಆರೋಗ್ಯ ತಪಾಸನೆ, ಮತ್ತು ದನಗಳ ಚಲನವಲನ ಇತ್ಯಾದಿ ಪರಿವೀಕ್ಷಣೆಗೆ ಸ್ಯಾಟಲೈಟ್ ಆಧರಿತ ವಿಶೇಷ ಸಾಫ್ಟ್ ವೇರ್ ಕೂಡ ಇವರು ನಿರ್ಮಿಸಿದ್ದಾರೆ.
ಆಧುನಿಕ ಹೈನುಗಾರಿಕೆ ತಂತ್ರಗಳ ಕುರಿತು ರೈತರಿಗೆ ಅರಿವು ಮೂಡಿಸಿ ಹಾಲಿನ ಉತ್ಪಾದನೆ ಹೆಚ್ಚಿಸುವುದು ಇವರ ಕನಸು. ವಿಶಾಲವಾದ ಹಾಲಿನ ಡೇರಿಯಲ್ಲಿ ಗ್ರಾಮದ ಸುಮಾರು 500 ಜನರಿಗೆ ಉದ್ಯೋಗ ಕೂಡ ದೊರಕಲಿದೆ ಎಂದು ರಂಜಿತ್ ಮುಕುಂದನ್ ಹೇಳುತ್ತಾರೆ.
ಇವರು ಜಿಎನ್ಎಸ್ ರೆಡ್ಡಿ ಮತ್ತು ಟಿ ಪ್ರಸನ್ನ ಅವರ ನೇತೃತ್ವದಲ್ಲಿ ಅಕ್ಷಯಕಲ್ಪ ಫಾರ್ಮ್ಸ್ ನಿರ್ಮಿಸಲಿದ್ದಾರೆ. ಇದಕ್ಕೆ ಈ ನಾಲ್ಕು ಜನರು ಸೇರಿದಂತೆ ಸುಮಾರು 21 ಜನರು ಪಾಲುದಾರರಿದ್ದಾರೆ. ಶಿಕ್ಷಣ ಪಡೆದವರೂ ಕೂಡ ಕೃಷಿ ಅಭಿವೃದ್ಧಿಗೆ ಸಹಕರಿಸುವಂತೆ ಮಾಡುವುದು ತಮ್ಮ ಗುರಿ ಎನ್ನುತ್ತಾರೆ ಶಶಿ ಕುಮಾರ್.
"ದನಗಳ ಖರೀದಿಗೆ ಬ್ಯಾಂಕ್ ಸಾಲ ಪಡೆಯಲು ಕಂಪನಿಯು ಕೃಷಿಕರಿಗೆ ನೆರವು ನೀಡಲಿದೆ. ಯಾವುದೇ ಮಧ್ಯವರ್ತಿಗಳ ಹಂಗಿಲ್ಲದೇ ಕಂಪನಿಯು ನೇರವಾಗಿ ರೈತರಿಂದ ಹಾಲು ಖರೀದಿಸಲಿದೆ. ಕಂಪನಿಯ ಸದಸ್ಯರಾದ ರೈತರ ದನಗಳ ಆರೋಗ್ಯ ಪರೀಕ್ಷೆಯನ್ನೂ ಕಂಪನಿ ಮಾಡಲಿದೆ" ಎಂದು ಮುಕುಂದನ್ ಹೇಳುತ್ತಾರೆ.
ಸ್ಯಾಟಲೈಟ್ ಆಧರಿತ ಹೈನುಗಾರಿಕೆಯಲ್ಲಿ ಸೆನ್ಸಾರ್, ಜಿಪಿಎಸ್, ಪೆಡೊ ಮೀಟರ್ ಮತ್ತು ಇತರ ಸಾಧನ ಗಳ ಬಳಕೆ ಮೂಲಕ ದನಗಳ ಚಲನವಲನ ಮತ್ತು ಪ್ರತಿದಿನ ನೀಡುವ ಹಾಲಿನ ಪ್ರಮಾಣ, ಆರೋಗ್ಯ, ದನದ ದೇಹದ ಉಷ್ಣತೆ ಇತ್ಯಾದಿಗಳ ಮೇಲೆ ನಿಗಾ ಇಡಲಾಗುತ್ತದೆ.