ಸಾಚಾ ಮನುಷ್ಯರಾದ್ರೆ ಸಿಬಿಐ ಎದುರಿಸಿ:ರೇವಣ್ಣ

ಹಾಸನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಅಕ್ರಮ ಗಣಿಗಾರಿಕೆ ನಡೆದಿರುವ ಕುರಿತು ಈ ಹಿಂದೆಯೇ ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿ ನೀಡಿದ್ದರೂ, ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇಡೀ ವರದಿಯನ್ನೇ ಕಸದ ಬುಟ್ಟಿಗೆ ಹಾಕಿದೆ ಎಂದು ರೇವಣ್ಣ ಆರೋಪಿಸಿದ್ದಾರೆ.
ಆದರೆ ಈಗ ಸುಪ್ರೀಂ ಕೋರ್ಟ್ ಲೋಕಾಯುಕ್ತರ ವರದಿ ಆಧಾರಿಸಿ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈಗ ಎಚ್ಚೆತ್ತಿರುವ ಸರ್ಕಾರದ ಕೆಲವು ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಇದರ ಸತ್ಯಾಸತ್ಯತೆ ಹೊರಬೀಳಬೇಕಾದರೆ ಸಮಗ್ರವಾಗಿ ತನಿಖೆ ನಡೆಸಲು ಸಿಬಿಐ ಸೂಕ್ತ ಎಂದು ರೇವಣ್ಣ ಹೇಳಿದ್ದಾರೆ.
ಎಲ್ಲಾ ಯಡಿಯೂರಪ್ಪ ಕೈಲಿದೆ: ಮುಖ್ಯಮಂತ್ರಿ ಯಡಿಯೂರಪ್ಪರ ಬಳಿಯೇ ಗಣಿ, ಅರಣ್ಯ, ಹಣಕಾಸು ಸೇರಿದಂತೆ ಹಲವು ಇಲಾಖೆಗಳಿವೆ. ಆದರೂ ಏಳು ಚೆಕ್ಪೋಸ್ಟ್ಗಳ ಮೂಲಕ ಅಕ್ರಮವಾಗಿ ಅದಿರು ಸಾಗಣೆಯಾಗುತ್ತಿದೆ. ಏ. 21ರ ಅದಿರು ಸಾಗಾಣಿಕೆ ಮುಂದುವರೆಯಲಿದೆ. ಮುಖ್ಯಮಂತ್ರಿಗಳ ಕೈವಾಡ ಇಲ್ಲ ಎನ್ನುವುದಾದರೆ ಸಿಬಿಐ ತನಿಖೆಗೆ ಯಾಕೆ ಒಳಪದಬಾರದು ಎಂದು ರೇವಣ್ಣ ಆಗ್ರಹಿಸಿದ್ದಾರೆ.
ಗಣಿ ಮಾಲೀಕರಿಂದ ಮುಖ್ಯಮಂತ್ರಿಗಳ ಕುಟುಂಬದ ಸದಸ್ಯರಿರುವ ಪ್ರೇರಣಾ ಟ್ರಸ್ಟ್ಗೆ 27 ಕೋಟಿ ರೂಪಾಯಿ ನೀಡಿರುವುದು ಈಗಾಗಲೇ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ ರೇವಣ್ಣ, ರಾಜ್ಯದ ಅದಿರು ಸಂಪತ್ತನ್ನು ರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.











Click it and Unblock the Notifications