ಈಶ್ವರಪ್ಪ, ಅನಂತಪ್ಪ ಭಿನ್ನರು ಯಾರು ಇಲ್ಲಪ್ಪ
ಮಂಗಳವಾರ ಮಧ್ಯಾಹ್ನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಇರುವುದು ನಿಜ. ಆದರೆ, ವಾರಾಂತ್ಯದಲ್ಲಿ ಎಲ್ಲವೂ ಸರಿ ಹೋಗುತ್ತದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರತಾಪ್ ಸಿಂಗ್ ರೂಢಿ ಶನಿವಾರ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ನಾವೆಲ್ಲಾ ನಡೆದುಕೊಳ್ಳುತ್ತೇವೆ ಎಂದರು.
ಯಡಿಯೂರಪ್ಪರ ನಾಯಕತ್ವವನ್ನು ಬದಲಾಯಿಸಲು ಭಿನ್ನರ ಗುಂಪು ವರಿಷ್ಠರ ಮೇಲೆ ಒತ್ತಡ ತರುತ್ತಿದೆ ಇದಕ್ಕಾಗಿ ಕೆಲ ಸಚಿವ ಮತ್ತು ಶಾಸಕರ ಒಂದು ಗುಂಪು ಮತ್ತೆ ರೆಸಾರ್ಟ್ ಗಳಲ್ಲಿ ಸಭೆ ನಡೆಸಿದೆ ಎಂಬುದು ಸುಳ್ಳು ವದಂತಿ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಬಿಎಸ್ ಯಡಿಯೂರಪ್ಪ ಅವರೆ ನಮ್ಮ ನಾಯಕರು. ಅವರು ಐದು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸುತ್ತಾರೆ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಎಲ್ಲ ಉಪಚುನಾವಣೆಗಳಲ್ಲಿ ಮತದಾರರು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ಈಗ ನಡೆದಿರುವ ಮೂರು ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಬಿಎಸ್ ಯಡಿಯೂರಪ್ಪ ಶಿಕಾರಿಪುರದಲ್ಲಿ ಮಂಗಳವಾರ ಮಧ್ಯಾನ್ಹ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಭಿನ್ನಮತ ಸುದ್ದಿ ಹರಡುವವರಿಗೆ ಶ್ರೀರಾಮನೇ ಬುದ್ಧಿ ಕೊಡಲಿ. ಚುನಾವಣೆ ಬಳಿಕ ನಾವು ಇನ್ನಷ್ಟು ಒಗ್ಗಟ್ಟಾಗಿದ್ದೇವೆ ಎಂದು ಯಡಿಯೂರಪ್ಪ ವಿಶ್ವಾಸದಿಂದ ನುಡಿದಿದ್ದಾರೆ.
ಆದರೆ, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅನಂತ್ ಕುಮಾರ್ ಭಿನ್ನಮತ ನಾಟಕದ ಸೂತ್ರಧಾರರಾಗಿದ್ದು, ಯಡಿಯೂರಪ್ಪ ಅವರ ಪತನಕ್ಕೆ ಮಹೂರ್ತ ಸಿದ್ಧವಾಗುತ್ತಿದೆ. ಭಿನ್ನರಿಗೆ ಈ ಬಾರಿ ಹೈಕಮಾಂಡ್ ಕೂಡಾ ಬೆಂಬಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.