ತ್ಯಾಗರಾಜನಗರ ಶನೀಶ್ವರನಿಗೆ ತಲೆಬಾಗಿದ ಹರ್ಭಜನ್
ಬೆಂಗಳೂರು, ಫೆ. 12: ಭಾರತದ ಅಗ್ರಗಣ್ಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇಂದು ಬಿಡುವು ಮಾಡಿಕೊಂಡು, ತ್ಯಾಗರಾಜನಗರದ ಶ್ರೀ ಶನೀಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಹರ್ಭಜನ್ ತಮ್ಮ ಬಹುದಿನ ಹರಕೆ ತೀರಿಸುವ ಇಚ್ಛೆ ವ್ಯಕ್ತಪಡಿಸಿದಾಗ, ಅವರ ಸಹಾಯಕ್ಕೆ ಬಂದವರು ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ನ ಮಾಲೀಕ ಟಿಎ ಶರವಣ. ಹರ್ಭಜನ್ ಅವರ ಮ್ಯಾನೇಜರ್ ಶರವಣ ಅವರಿಗೆ ಕರೆ ಮಾಡಿ ದೇಗುಲಕ್ಕೆ ಕರೆದೊಯ್ಯುವಂತೆ ಕೇಳಿಕೊಂಡಿದ್ದಾರೆ.
ಸುಮಾರು ಪೂಜೆ ಸಾಮಾಗ್ರಿಗಳನ್ನು ಹೊತ್ತು ತಂದಿದ್ದ ಹರ್ಭಜನ್ ಗೆ ದೇಗುಲದ ದಾರಿ ತೋರಿಸಿ, ಜೊತೆಯಲ್ಲಿ ನಡೆದ ಶರವಣ ಅವರು ನಂತರ ಸುದ್ದಿಗಾರರಿಗೆ ಹರ್ಭಜನ್ ಹರಕೆಯ ಬಗ್ಗೆ ವಿವರಿಸಿದರು. ವಿಶ್ವಕಪ್ ತರಬೇತಿಯಲ್ಲಿರುವ ಹರ್ಭಜನ್ ಯಾರೊಟ್ಟಿಗೂ ಮಾತನಾಡದೆ, ಪೂಜೆ ಸಲ್ಲಿಸಿ ಹೊರ ನಡೆದರು.
ಕ್ರಿಕೆಟ್ ವಿಶ್ವಕಪ್ 2011 ವೇಳಾಪಟ್ಟಿ
ವಿಶ್ವಕಪ್ ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿಸಿ, ಕಪ್ ಗೆಲ್ಲಬೇಕು ಎಂಬ ಹರಕೆ ಹೊತ್ತಿದ್ದ ಹರ್ಭಜನ್ ಅವರಿಗೆ ದೇಗುಲ ತೋರಿಸುವ ಜವಾಬ್ದಾರಿ ನನಗೆ ಸಿಕ್ಕಿದ್ದು ನನ್ನ ಪುಣ್ಯ. ತ್ಯಾಗರಾಜನಗರದ ಶನೀಶ್ವರ ದೇಗುಲ ತುಂಬಾ ಪ್ರಭಾವಿಯಾಗಿದೆ. ಇಲ್ಲಿರುವ ಅಖಂಡ ಜ್ಯೋತಿಯಲ್ಲಿ ದೀಪ ಬೆಳಗಿಸಿ ಎಣ್ಣೆಯಲ್ಲಿ ತಮ್ಮ ಮುಖವನ್ನು ಹರ್ಭಜನ್ ನೋಡಿಕೊಂಡರು. ಪೂಜೆ ಸಲ್ಲಿಸಿ, ಭಕ್ತಿಯಿಂದ ತಂಡದ ಒಳಿತಿಗಾಗಿ ಬೇಡಿಕೊಂಡರು ಎಂದು ಶರವಣ ಹೇಳಿದರು.
ಹರ್ಭಜನ್ ಅವರು ತಮ್ಮ ಏರಿಯಾಗೆ ಬಂದಿರುವ ಸುದ್ದಿ ಪಕ್ಕದ ಗಲ್ಲಿಯಿಂದ ಹಿಡಿದು ಆ ಕಡೆ ಕಿಮ್ಸ್ ಕಾಲೇಜು ಮೈದಾನ, ಈ ಕಡೆ ಡಂಕಾಲಾ ಫೀಲ್ಡ್ ನಲ್ಲಿದ್ದ ಅವಿರತ ಕ್ರಿಕೆಟ್ ಅಭ್ಯಾಸ ನಿರತ ಅಭಿಮಾನಿಗಳು ಶನೀಶ್ವರನ ಗುಡಿಯಲ್ಲಿ ಹರ್ಭಜನ್ ಕಾಣಲು ಧಾವಿಸಿ ಬಂದರು. ಆದರೆ, ಹರ್ಭಜನ್ ಯಾರ ಕೈಗೂ ಸಿಗದೇ ಅಷ್ಟರಲ್ಲಿ ಅಲ್ಲಿಂದ ಹೊರಟ್ಟಿದ್ದರು.