ಸ್ವಚ್ಛ, ಸುಂದರ ಬಳ್ಳಾರಿ ನಗರ ರೆಡ್ಡಿಯ ಕನಸು
ಸುಮಾರು ದಶಕಗಳ ಹಿಂದೆ ಬಳ್ಳಾರಿ ಎಂದರೆ ಸಾಕು 'ಜಾಲಿ, ಬಿಸಿಲು, ಬಿರು ಬಿಸಿಲು" ಎಂದು ಮೂಗು ಮುರಿಯುವ ಕಾಲಿವಿತ್ತು. ಆಧುನೀಕತೆ, ನಾಗರೀಕತೆಯಲ್ಲಿ ಉಂಟಾಗುತ್ತಿರುವ ಬದಲಾವಣೆ, ಆರೋಗ್ಯ, ಸ್ವಚ್ಛತೆಗೆ ಪ್ರತಿಯೊಬ್ಬರೂ ನೀಡುತ್ತಿರುವ ಆದ್ಯತೆ, ತೋರುತ್ತಿರುವ ಕಾಳಜಿಯಿಂದಾಗಿ ಕಸ, ತ್ಯಾಜ ವಿಲೇವಾರಿ ಪದ್ಧತಿಯೂ ಕೂಡ ಕ್ರಮೇಣ ಬದಲಾಗುತ್ತಿದೆ.
ಕಸದಿಂದ ರಸ: ಈ ನಿಟ್ಟಿನಲ್ಲಿ 'ಕಸದಿಂದ ರಸ" ಎನ್ನುವ ನಾಣ್ನುಡಿಗೆ ಕಸದಿಂದ ಗೊಬ್ಬರ, ಕಸದಿಂದ ವಿದ್ಯುತ್, ಕಸದಿಂದ ಇನ್ನೇನನ್ನಾದರೂ ಉತ್ಪಾದಿಸುವ ಪ್ರಯೋಗಗಳು ನಿರಂತರವಾಗಿ ನಡೆಯುತ್ತಲೇ ಇವೆ. ಕಾರಣ ಕಸವನ್ನು ಕೂಡ ವೈಜ್ಞಾನಿಕವಾಗಿ ಸಂಗ್ರಹ ಮಾಡುವ ಪದ್ಧತಿ ಜಾರಿ ಆಗುತ್ತಿದೆ.
ಕಸ ಸಂಗ್ರಹ, ವಿಲೇವಾರಿ, ಸಾಗಾಣಿಕೆ, ಇನ್ನಿತರೆ ವಿಚಾರಗಳ ಕುರಿತು ಐಎಸ್ಓ ಪುರಸ್ಕೃತ ಎಸ್.ಎ. ಖಾದರ್ಸಾಬ್ ಅವರು ಅಧಿಕಾರಿಗಳು, ಸಿಬ್ಬಂದಿ, ಕಸ ಸಂಗ್ರಹಾಕಾರರು, ಪೌರಕಾರ್ಮಿಕರು, ಚುನಾಯಿತ ಪ್ರತಿನಿಧಿಗಳು, ವಾಣಿಜ್ಯೋದ್ಯಮಿಗಳು, ವೈದ್ಯರು, ಹೋಟೆಲ್ ಮಾಲೀಕರು, ಸ್ವಸಹಾಯ ಗುಂಪುಗಳಿಗೆ ಹಂತ ಹಂತವಾಗಿ ತರಬೇತಿ ನೀಡಿದ್ದಾರೆ. ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.
ರೆಡ್ಡಿ ಮಾದರಿ ಯೋಜನೆ : ಆಂಧ್ರದ ನಂದ್ಯಾಲ ಪುರಸಭೆಗೆ ಅಧಿಕಾರಿಗಳ ಜೊತೆ ಭೇಟಿ ನೀಡಿದ್ದ ನಗರ ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ ಅವರು ಅಲ್ಲಿಯ ಮಾದರಿಯಲ್ಲೇ ಕಸ ಸಂಗ್ರಹ ಮಾಡುವುದನ್ನು ಬಳ್ಳಾರಿ ಮಹಾನಗರ ಪಾಲಿಕೆಯಲ್ಲೂ ಕಸ ಸಂಗ್ರಹ ಮಾಡುವ ಕ್ರಿಯಾ ಯೋಜನೆ ಜಾರಿಗೆ ತರುವಲ್ಲಿ ಯೋಜನೆ ರೂಪಿಸಿ, ಜಾರಿಗೆ ತಂದರು.
ಯೋಜನೆ ವಿವರ: ಬಳ್ಳಾರಿ ಮಹಾನಗರ ಪಾಲಿಕೆಯ 35 ವಾರ್ಡ್ಗಳನ್ನು ಆರು ವಿಭಾಗಗಳಾಗಿ ರಚಿಸಿದ ಪಾಲಿಕೆ 36 ಮಾರ್ಗಗಳ ನಕ್ಷೆಯನ್ನು ರೂಪಿಸಿದೆ. ಪ್ರತಿ ಮಾರ್ಗಕ್ಕೆ ಓರ್ವ ರೂಟ್ ಮೇನೇಜರ್, ಒಂದು ವಾಹನ, ವಾಹನ ಚಾಲಕ, 7 ಜನ ಕಸ ಸಂಗ್ರಹಾಕಾರರನ್ನು ನೇಮಕ ಮಾಡಿದೆ. ಪ್ರತಿ ವಾಹನದಲ್ಲಿ 20-30 ಕಸ ಸಂಗ್ರಹದ ಬಕೆಟ್ಗಳು ಇರುತ್ತವೆ. ದ್ರವ ಮತ್ತು ಘನ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತದೆ.
ಈ ಸಿಬ್ಬಂದಿ ಅಲ್ಲದೇ ರಸ್ತೆಗಳಲ್ಲಿಯ ಕಸ ಗುಡಿಸಲು, ಡಿ.ಸಿಲ್ಟಿಂಗ್ ಮಾಡಲು ಪ್ರತ್ಯೇಕ ತಂಡಗಳು ರಚನೆ ಆಗಿವೆ. ಮಾಂಸದ ಮಾರುಕಟ್ಟೆ, ಹೋಟೆಲ್, ಆಸ್ಪತ್ರೆ ಮತ್ತಿತರ ಕಸ ಸಂಗ್ರಹಕ್ಕೆ ಆಯಾ ಮಾರ್ಗದಲ್ಲೇ ಪ್ರತ್ಯೇಕ ತಂಡಗಳು ಇರುತ್ತವೆ. ಪೌರ ಕಾರ್ಮಿಕರು ಸಂಗ್ರಹ ಮಾಡುವ ಪ್ರತಿ ಕೆಜಿ ಕಸಕ್ಕೆ 1 ರುಪಾಯಿ ಪ್ರೋತ್ಸಾಹ ಧನವನ್ನು ಪಾಲಿಕೆ ನೀಡಲಿದೆ.
ವೇಣಿವೀರಾಪುರದ ಬಳಿಯ ಬಯಲು ಪ್ರದೇಶದಲ್ಲಿ ಕಸ ಸಂಗ್ರಹ ಕಾರ್ಯ ಭರದಿಂದ ನಡೆದಿದೆ. ಇದೇ ಸ್ಥಳದಲ್ಲೇ ಕಾಂಪೋಸ್ಟ್ ಗೊಬ್ಬರ ತಯಾರು ಮಾಡುವ ಪ್ರಯತ್ನ ನಡೆದಿದೆ. ಭವಿಷ್ಯದ ದಿನಗಳಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಪ್ರಾರಂಭ ಆಗುವ ಸಾಧ್ಯತೆಗಳೂ ಇವೆ. [ಕಸ]