ಜಿ-ಕೆಟಗರಿ ಸೈಟ್ ಹಂಚುವ ಅಧಿಕಾರ ಸರಕಾರಕ್ಕಿಲ್ಲ
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ ಮಾಜಿ ಶಾಸಕ ಕುಮಾರ ಬಂಗಾರಪ್ಪ ಅವರಿಗೆ ಸರಕಾರ ಹಂಚಿಕೆ ಮಾಡಿದ್ದ ಜಿ-ಕೆಟಗರಿ ಸೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾ ಎಸ್ ಅಬ್ದುಲ್ ನಜೀರ್ ಈ ಆದೇಶ ನೀಡಿದ್ದಾರೆ.
ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ಸೈಟ್ ಮಂಜೂರು ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಸರಕಾರಕ್ಕೆ ಇಲ್ಲ. ಬಿಡಿಎ ನಿಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ.
ಕುಮಾರ ಬಂಗಾರಪ್ಪ ಅವರಿಗೆ 2004ರಲ್ಲಿ ಸರಕಾರ ಬಾಣಸವಾಡಿಯಲ್ಲಿ ಜಿ-ಕೆಟಗರಿ ಅಡಿಯಲ್ಲಿ ನಿವೇಶನ ಮಂಜೂರು ಮಾಡಿರುತ್ತದೆ. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್ಎಸ್ಸಾರ್ ಲೇಔಟ್ನಲ್ಲಿ ನಿವೇಶನವನ್ನು ಬಿಡಿಎ ಮಂಜೂರು ಮಾಡಿರುತ್ತದೆ.
ಮಂಜೂರಾದ ಮೂರೇ ದಿನಗಳಲ್ಲಿ ಆ ನಿವೇಶನವನ್ನು ಕುಮಾರ್ ಬಂಗಾರಪ್ಪ 80ಲಕ್ಷ ರುಪಾಯಿಗಳಿಗೆ ಮಧು ದೊಂಡಿಬಾರಿಗೆ ಮಾರಾಟ ಮಾಡಿರುತ್ತಾರೆ. ನಂತರದ ಐದು ತಿಂಗಳಲ್ಲಿ ದೊಂಡಿಬಾ ಅವರಿಂದ ಅದೇ ನಿವೇಶನವನ್ನು 1.20 ಕೋಟಿ ರುಪಾಯಿ ಗಳಿಗೆ ರಾಜು ಎಂಬುವವರು ಖರೀದಿ ಮಾಡಿರುತ್ತಾರೆ.
ನಂತರ ಕೆಲವು ನಿರ್ದಿಷ್ಟ ಕಾರಣಗಳನ್ನು ನೀಡಿ ಜಿ ಕೆಟಗರಿಯಡಿ ಮಂಜೂರಾದ ಕೆಲವು ನಿವೇಶನಗಳನ್ನು ರದ್ದು ಮಾಡಿ ಬಿಡಿಎ ಆದೇಶ ಹೊರಡಿಸುತ್ತದೆ. ರದ್ದಾದ ನಿವೇಶನಗಳಲ್ಲಿ ರಾಜು ಅವರ ನಿವೇಶನವಿರುತ್ತದೆ. ಈ ಆದೇಶವನ್ನು ಪ್ರಶ್ನಿಸಿ ರಾಜು ಹೈಕೋರ್ಟ್ಗೆ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು.