ನಿವೃತ್ತಿ ನಂತರ ರಾಜಕೀಯ ಸೇರಲ್ಲ : ಸಂತೋಷ ಹೆಗ್ಡೆ
ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಿದ್ದರು. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಒಂದೇ ಶಾಲೆಯಿಂದ ಬಂದವರು. ಯಾವ ಪಕ್ಷಕ್ಕೂ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಈಗಾಗಲೇ ಒಂದು ಬಾರಿ ರಾಜೀನಾಮೆ ವಾಪಸ್ ಪಡೆದು ತಪ್ಪು ಮಾಡಿರುವುದರಿಂದ ಅಧಿಕಾರ ಇರುವವರೆಗೂ ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ ಎಂದರು.
ನೀವು ನಿವೃತ್ತರಾದ ನಂತರ ರಾಜಕೀಯಕ್ಕೆ ಸೇರುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಎಲ್ಲ ರಾಜಕೀಯ ಪಕ್ಷಗಳ ಶಾಲೆ ಒಂದೇ ಬಹುತೇಕ ರಾಜಕೀಯ ಮುಖಂಡರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ, ರಾಜಕೀಯ ಸೇರುವ ಉದ್ದೇಶ ನನಗಿಲ್ಲ ಎಂದು ಹೇಳಿದರು.
ಅನೇಕ ಸಂದರ್ಭದಲ್ಲಿ ರಾಜಕೀಯ ಪಕ್ಷದ ಮುಖಂಡರು ಲೋಕಾಯುಕ್ತ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೂ, ಜನತೆ ಸಂಸ್ಥೆ ಮೇಲಿಟ್ಟಿದ್ದ ನಂಬಿಕೆಗೆ ಚ್ಯುತಿ ಬಾರದ ಹಾಗೆ ಕರ್ತವ್ಯ ನಿರ್ವಹಿಸುತ್ತೇವೆ. ಲೋಕಾಯುಕ್ತ ಸಂಸ್ಥೆಯು ಇನ್ನೂಬ್ಬರಿಗೆ ತೊಂದರೆಯಾಗದ ರೀತಿ ಕೆಲಸ ಮಾಡುತ್ತಿದೆ ಎಂದು ಸಂತೋಷ ಹೆಗ್ಡೆ ವಿವರಿಸಿದರು.
ರಾಜ್ಯದಲ್ಲಿ ನಡೆದ ಎರಡು ಪ್ರಮುಖ ಹಗರಣಗಳಲ್ಲಿ 20 ಮಂದಿ ಪತ್ರಕರ್ತರು ಭಾಗಿಯಾಗಿದ್ದಾರೆಂಬ ದೂರು ಇದೆ. ಆದರೆ, ಪತ್ರಕರ್ತರು ಲೋಕಾಯುಕ್ತ ವ್ಯಾಪ್ತಿಗೆ ಸೇರದ ಕಾರಣ ಅವರ ಮೇಲೆ ಕ್ರಮ ಜರುಗಿಸಲು ಆಗುವುದಿಲ್ಲ ಎಂದರು. ಮಾಧ್ಯಮ ಕ್ಷೇತ್ರದಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದೆ. 2ಜಿ ಸ್ಪೆಕ್ಟ್ರಂ ಹಣಕ್ಕಾಗಿ ಸುದ್ದಿ ಸೇರಿದಂತೆ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಮಾಧ್ಯಮವು ಭ್ರಷ್ಟಾಚಾರದಲ್ಲಿ ತೊಡಗಿರುವುದು ವಿಷಾದನೀಯ ಎಂದು ಹೆಗ್ಡೆ ಹೇಳಿದರು.