ಮಾನ್ಯ ರಾಜ್ಯಪಾಲರ ಮುಂದಿನ ನಡೆ ಏನು?
ಮೊದಲ ನಡೆ: ಬಿಜೆಪಿ ವಿಶ್ವಾಸಮತ ಸಾಬೀತಿನ ಬಗ್ಗೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕ್ಕೆ ಪತ್ರ ರವಾನಿಸಿದ್ದಾರೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಕೇಂದ್ರ ಸರ್ಕಾರ ಸಭೆ ಸೇರಲಿದೆ.ಕೇಂದ್ರದಿಂದ ನಿರ್ದೇಶನ ಬಂದ ನಂತರ ರಾಜ್ಯಪಾಲರು ತಮ್ಮ ಮುಂದಿನ ನಡೆಯ ಬಗ್ಗೆ ವಿಷದಪಡಿಸಲಿದ್ದಾರೆ.
ಎರಡನೆ ನಡೆ: ಕಾಂಗ್ರೆಸ್ ,ಜೆಡಿಎಸ್ ಶಾಸಕರು ರಾಜ್ಯಭವನಕ್ಕೆ ತೆರಳಿ ಆಡಳಿತ ಪಕ್ಷ ಬಹುಮತ ಪಡೆದ ವಿಧಾನದ ಬಗ್ಗೆ ಪ್ರಶ್ನಿಸಿ ದೂರು ಸಲ್ಲಿಸಿದ್ದಾರೆ. ಈಗ ಮತ್ತೆ ಅಖಾಡಕ್ಕಿಳಿದಿರುವ ಹಂಸರಾಜ್ ಭಾರಧ್ವಾಜ್ ಅವರು ದೂರಿನ ಆಧಾರದ ಮೇಲೆ ಇಡೀ ಸದನದ ಪ್ರಕ್ರಿಯೆಯನ್ನು ಅನೂರ್ಜಿತ ಎಂದು ಘೋಷಿಸಬಹುದು.
ಮೂರನೇ ನಡೆ: ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಬಹುದು. ಕೆಲ ದಿನಗಳ ನಂತರ ಮತ್ತೆ ಬಹುಮತ ಸಾಬೀತುಪಡಿಸುವಂತೆ ಬಿಎಸ್ ಯಡಿಯೂರಪ್ಪ ಅವರಿಗೆ ಸೂಚಿಸಬಹುದು. ಅಥವಾ ಪ್ರತಿಪಕ್ಷಗಳು ಸರ್ಕಾರ ರಚನೆಗೆ ಮುಂದಾದರೆ ಅವರಿಗೂ ಬಹುಮತ ಸಾಬೀತಿಗೆ ಅವಕಾಶ ಕಲ್ಪಿಸಬಹುದು.
ನಾಲ್ಕನೇ ನಡೆ: ಬಹುಮತ ಸಾಬೀತು ಗೊಂದಲಮಯವಾದರೆ, ರಾಷ್ಟ್ರಪತಿ ಆಡಳಿತ ಜಾರಿಗೆ ತರಬಹುದು. ಪರಿಸ್ಥಿತಿ ಸುಧಾರಿಸುವವರೆಗೂ ಸುಮಾರು ಆರು ತಿಂಗಳು ಅಥವಾ ವರ್ಷದವರೆಗೂ ರಾಷ್ಟ್ರಪತಿ ಆಡಳಿತ ವಿಸ್ತರಿಸಬಹುದು.
ಇದಲ್ಲದೆ, ಈ ಮುಂಚೆ ಕೆಸಿ ಕೊಂಡಯ್ಯ ನೇತೃತ್ವದ ಕಾಂಗ್ರೆಸ್ ನಾಯಕರು ರೆಡ್ಡಿ ಸೋದರರ ಲಾಭದಾಯಕ ಹುದ್ದೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸಿ, ಜನಾರ್ದನ ರೆಡ್ಡಿ ಅವರ ಮೇಲೆ ಕ್ರಮ ಕೈಗೊಳ್ಳಬಹುದು.
ಅತಂತ್ರರಾದ ಅತೃಪ್ತರು: ಜೆಡಿಎಸ್ ಕಾಂಗ್ರೆಸ್ ನಡುವೆ ಸಿಕ್ಕ ಬಿಜೆಪಿಯ ಬಂಡಾಯ ನಾಯಕರು ಈಗ ಅನರ್ಹಗೊಂಡಿರುವುದರಿಂದ ದಿಕ್ಕು ತೋಚದೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದು ವೇಳೆ ಶಾಸಕತ್ವ ಅನರ್ಹತೆ ಜಾರಿಯಾದರೆ, ಇನ್ನೂ 6 ವರ್ಷಗಳ ಕಾಲ 11 ಬಿಜೆಪಿ ಹಾಗೂ 5 ಜನ ಪಕ್ಷೇತರರು ರಾಜಕೀಯ ಸಂನ್ಯಾಸ ತೆಗೆದುಕೊಳ್ಳಬೇಕಾಗುತ್ತದೆ.