ಸೋಲಿನ ಹೊಣೆಹೊತ್ತು ಸಿದ್ದರಾಮಯ್ಯ ಮನೆಗೆ
ಸೆ. 13 ರಂದು ನಡೆದ ಗುಲ್ಬರ್ಗಾ ದಕ್ಷಿಣ ಮತ್ತು ಕಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದೆ. ಗುಲ್ಬರ್ಗಾ ದಕ್ಷಿಣದಲ್ಲಿ ದಿವಂಗತ ಚಂದ್ರಶೇಖರ ಪಾಟೀಲ್ ರೇವೂರು ಅವರ ಪತ್ನಿ ಅರುಣಾ ಆಯ್ಕೆಯಾಗಿದ್ದರೆ, ಕಡೂರಿನಲ್ಲಿ ಬಿಜೆಪಿಯ ಡಾ ವೈಸಿ ವಿಶ್ವನಾಥ್ ಗೆಲುವಿನ ನಗೆ ಬೀರಿದ್ದಾರೆ.
ಕಡೂರಿನಲ್ಲಿ ಶಾಸಕರಾಗಿದ್ದ ದಿವಂಗತ ಕೃಷ್ಣಮೂರ್ತಿ ಅವರು ಸಿದ್ಧರಾಮಯ್ಯ ಅವರ ಕಟ್ಟಾ ಬೆಂಬಲಿಗರು. ಹೀಗಾಗಿ ಕಡೂರಿ ವಿಧಾನಸಭೆ ಕ್ಷೇತ್ರದಲ್ಲಿ ಸಿದ್ದು ಮುತುವರ್ಜಿ ವಹಿಸಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಹಗಲಿರುಳು ಹೋರಾಟ ನಡೆಸಿದ್ದರು. ಅದು ಅಲ್ಲದೆ, ಗಣಿಗಾರಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಬಳ್ಳಾರಿವರೆಗೆ ಸಿದ್ದರಾಮಯ್ಯ ನಡೆಸಿದ್ದ ಪಾದಯಾತ್ರೆಗೆ ದೊರೆತ ಅಪಾರ ಬೆಂಬಲ ಕೆಲಸ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮತದಾರ ಮಾತ್ರ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾನೆ.
ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನಾವು ಸೋತಿದ್ದೇವೆ. ಜನರ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ. ಸೋಲಿನ ಹೊಣೆಯನ್ನೇ ನಾನೇ ಹೊರುತ್ತೇನೆ ಎಂದು ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು. ಕಡೂರಿನಲ್ಲಿ ಪಕ್ಷ ಸೋತಿದ್ದು ತೀವ್ರ ನೋವಾಗಿದೆ. ಅಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೆ. ಆದರೆ, ಜನ ನಮ್ಮ ಕೈಹಿಡಿಯಲಿಲ್ಲ ಎಂದು ನೋವಿನಿಂದ ಹೇಳಿದರು.
ಸೋಲಿನ ಹೊಣೆಹೊತ್ತ ನಾನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸೋನಿಯಾ ಗಾಂಧಿ ರಾಜೀನಾಮೆ ಪತ್ರ ರವಾನಿಸಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್ ನಲ್ಲಿರುವ ಒಳಜಗಳದಿಂದ ಬೇಸತ್ತು ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೂ ಬೇಡ : ಉಪಚುನಾವಣೆ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಆರ್ ವಿ ದೇಶಪಾಂಡೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪದವಿ ನನಗೂ ಬೇಡ ಎಂದು ಅವರು ಹೇಳಿದ್ದಾರೆ.