ಇದು ವಿಶಾಲ ಭಾರತ, ಸ್ವಾಮೀ!

- ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸೂಕ್ತ ನೆನಹಿನ ಕಾರ್ಯ(ಕ್ರಮ) ನಡೆಯಲಿಲ್ಲ. ಸರ್ಕಾರಗಳಿಗೆ ಆ ಯೋಗ್ಯತೆ ಇಲ್ಲ ಬಿಡಿ.
* ಪಂಡಿತ ಪುಟ್ಟರಾಜ ಗವಾಯಿಗಳನ್ನು ನೋಡಲು ಜನಸಾಗರ.
- ನಿಜವಾದ ಸೂಪರ್ ಸ್ಟಾರ್ ಎಂದರೆ ಗವಾಯಿಗಳು. ಇದು ಜನರ ಆಯ್ಕೆ.
* ರಾಜ್ಯದ ಪರಿಶಿಷ್ಟರಿಗೆ ಭೂಮಿ.
- ಶಿಷ್ಟರಿಗೆ, ಪರಿಶಿಷ್ಟರಿಗೆ ತುಂಡು ಭೂಮಿ. ಭ್ರಷ್ಟರಿಗೆ, ದುಷ್ಟರಿಗೆ ನುಂಗಿದಷ್ಟೂ ಭೂಮಿ!
* ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ, ಸಿಂಹಗಳ ಸಾವು.
- ಹುಲಿ ರಕ್ಷಣೆಗೆ ಹತ್ತು ಕೋಟಿ, ಸಿಂಹಕ್ಕೆ ಇಪ್ಪತ್ತು ಕೋಟಿ ಘೋಷಿಸಿಲ್ಲ ಸಿ.ಎಂ. ಇನ್ನೂ!
* ರಾಜ್ಯದ ಕೆಲವೆಡೆ ಆನೆಗಳ ಹಾವಳಿ ಮಿತಿಮೀರಿದೆ.
- ಮುವ್ವತ್ತು ಕೋಟಿ?
* ಪ್ರಕೃತಿ ವಿಕೋಪ ನಿಧಿ ಬಳಸಿಕೊಂಡು (ಮಾಜಿ) ಜಿಲ್ಲಾಧಿಕಾರಿಯಿಂದ ಬಂಗಲೆ ನಿರ್ಮಾಣ.
- ಅದು ಆ ಅಧಿಕಾರಿಯ ಪ್ರಕೃತಿ. ಕೋಪ ಅನವಶ್ಯ.
* ರಾಮಚಂದ್ರಗೌಡರನ್ನೀಗ ಕೇಳೋರಿಲ್ಲ.
- ಆದ್ದರಿಂದ ಹರಿಕಥೆ ಸ್ಟಾಪ್?
* ಅಂದು ರಾಮಾಯಣ, ಇಂದು ರಾಮಚಂದ್ರಾಯಣ.
- ಗೌಡಾಯಣ ಅಲ್ಲ. ಏಕೆಂದರೆ ಅದು ಬೇರೆಯವರಿಗೆ ರಿಸರ್ವ್ ಆಗಿದೆ.
* ಹರತಾಳು ಹಾಲಪ್ಪ ಮಾಡಿದ್ದು ಖಾತ್ರಿಯಾಗಿದೆ.
- ಇನ್ನು, ಮಾಡಿದ್ದುಣ್ಣೋ ಮಹರಾಯ.
* ತೆಲಗಿ ದೋಷಿ ಎಂದು ನ್ಯಾಯಾಲಯದ ತೀರ್ಪು.
- ಆಸ್ತಿ ನಮ್ಮ ಮಾವನ ಸ್ವಂತದ್ದು ಎಂದು ಅದೇ ದಿನ ತೆಲಗಿಯ ಭಾವೀ ಅಳಿಯನ ಘೋಷಣೆ!
* ವಿದ್ಯುತ್ ಕಡಿತ ಮುಂದುವರಿಯಲಿದೆ.
- ಇದೂ ಒಂದು ಸುದ್ದಿಯೇ?
* ಮಾದಾರ ಚನ್ನಯ್ಯ ಸ್ವಾಮೀಜಿ ಪಾದಯಾತ್ರೆ ಯಶಸ್ವಿ.
- ಇದು ನಿಜಕ್ರಾಂತಿಗೆ ಮುನ್ನುಡಿಯಾದರೆ ಚೆನ್ನಯ್ಯ.
* ಶ್ರೀನಗರದಲ್ಲಿ ನಿಲ್ಲದ ಹಿಂಸಾಚಾರ.
- ಹೀಗೇ ಮುಂದುವರಿದರೆ ಕೊನೆಗೊಂದು ದಿನ ಅದು ಇತಿಶ್ರೀ ನಗರ!
* ಕುಸ್ತಿ ಕೋಚ್ ಸತ್ಪಾಲ್ ಸಿಂಗ್ ಅವರನ್ನು ಅವಮಾನಿಸಿದ ಕ್ರೀಡಾ ಸಚಿವ ಗಿಲ್.
- 'ಗಿಲ್ಲು ಗಿಲ್ಲೆನುತಾ, ಎಂ.ಎಸ್. ಗಿಲ್ಲೇ ತಾನೆನುತಾ, ಬಲ್ಲಿದ ಸತ್ಪಾಲ್ ಸಿಂಗರಮೇಲೆ ಚೆಲ್ಲಿದನೋ ಕೆಸರಾ!'
* ಒಂದೇ ದಿನದಲ್ಲಿ ಇಷ್ಟೆಲ್ಲ ಸುದ್ದಿ!
- ಇದು ವಿಶಾಲ ಭಾರತ, ಸ್ವಾಮೀ!












Click it and Unblock the Notifications