ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರು ಇನ್ನು ಹೆದರಬೇಕಿಲ್ಲ
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಮತ್ತು ಮಹಿಳಾ ಹಕ್ಕುಗಳ ಸಂರಕ್ಷಣೆ ಬಗ್ಗೆ ಈ ಸಮಿತಿಯು 3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ಮಾಡಲಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ 'ಕುಟುಂಬದೊಳಗೆ ಮಹಿಳೆಯರ ಮೇಲೆ ನಡೆದ ದೌರ್ಜನ್ಯ' ಕುರಿತ ಜಿಲ್ಲಾಮಟ್ಟದ ಸಮನ್ವಯ ಸಮಿತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು (ರಾಜ್ಯ) ಯೋಜನೆ, ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಸುಮಂಗಲಿ ಸೇವಾಶ್ರಮ ಕೇಂದ್ರಗಳಲ್ಲಿ ಒಟ್ಟು 609 ದೂರುಗಳು ಬಂದಿರುತ್ತವೆ. ಇವುಗಳಲ್ಲಿ ಮಾನಸಿಕ ಮತ್ತು ದೈಹಿಕ ಕಿರುಕುಳ, ಹಿಂಸೆ, ಆಸ್ತಿ ವಿಷಯಗಳು ಮತ್ತು ವರದಕ್ಷಣೆ ಪ್ರಕರಣಗಳು ಹೆಚ್ಚು.
ಮಹಿಳೆಯರ ಮೇಲೆ ನಡೆಯುವ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳಿಗೆ ಕುಟುಂಬದಲ್ಲಿ ನಡೆಯುವ ಆಂತರಿಕ ಕಲಹಗಳು, ಆರ್ಥಿಕ ಸಮಸ್ಯೆಗಳು, ವ್ಯಕ್ತಿಯ ದುಶ್ಚಟಗಳು ಮತ್ತು ನಿರ್ಲಕ್ಷತೆ ಕಾರಣಗಳೇ ಹೆಚ್ಚು. ಇವುಗಳು ಪುನರಾವರ್ತನೆಯಾಗದಿರಲು ಕೌನ್ಸಿಲಿಂಗ್, ಕೌಟುಂಬಿಕ ಸಮಾಲೋಚನೆ, ಸಾಂತ್ವನ ನೀಡುವುದರಿಂದ ಸಮಸ್ಯೆಗಳನ್ನು ನಿಯಂತ್ರಿಸಬಹುದು. ನೊಂದ ಮಹಿಳೆಯರಿಗೆ ಕಾನೂನು ನೆರವು ನೀಡುವ ಬಗ್ಗೆ ಸ್ಥಳೀಯ ಶಿಶು ಕಲ್ಯಾಣಾಭಿವೃದ್ದಿ ಅಧಿಕಾರಿ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುವರು.
ದೂರು ನೀಡುವುದೆಲ್ಲಿ?
ದೌರ್ಜನ್ಯಕ್ಕೊಳಗಾದ ಮಹಿಳೆ ನೇರವಾಗಿ ಮ್ಯಾಜಿಸ್ಟ್ರೇಟ್ ಅವರಿಗೆ ದೂರು ನೀಡಬಹುದು. ಶಿಶು ಕಲ್ಯಾಣಾಭಿವೃದ್ಧಿ ಅಧಿಕಾರಿ/ರಕ್ಷಣಾಧಿಕಾರಿ ನೊಂದ ಮಹಿಳೆಯಿಂದ ಅರ್ಜಿ ಸ್ವೀಕರಿಸಿ ಕೌಟುಂಬಿಕ ಮಾಹಿತಿ ವರದಿ ದಾಖಲಿಸಿ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ಅಗತ್ಯವಿರುವ ವೈದ್ಯಕೀಯ, ಕಾನೂನು ನೆರವು, ಆಶ್ರಯ ಮತ್ತು ಆರ್ಥಿಕ ಸಹಾಯವನ್ನು ವಿವಿಧ ಸ್ವಯಂಸೇವಾ ಸಂಸ್ಥೆ ಮತ್ತು ಸಂಘಗಳ ಮೂಲಕ ಒದಗಿಸಲಾಗುವುದು. ಈ ಕಾಯ್ದೆಯನ್ವಯ ದೌರ್ಜನ್ಯಕ್ಕೊಳಗಾದ ಮಹಿಳೆ ಹಾಗೂ ಆಕೆಯ ಮಗು ಸಹ ಈ ನೆರವುಗಳನ್ನು ಪಡೆಯಲು ಅವಕಾಶವಿರುತ್ತದೆ.
ಇವು ಮಹಿಳಾ ದೌರ್ಜನ್ಯಗಳು
ಕುಟುಂಬದ ಮಹಿಳೆಯನ್ನು ಹೊಡೆಯುವುದು, ಕಚ್ಚುವುದು, ಒದೆಯುವುದು, ಶರೀರದ ಯಾವುದೇ ಭಾಗಕ್ಕೆ ನೋವುಂಟು ಮಾಡುವುದು, ಲೈಂಗಿಕ ಕಿರುಕುಳ, ಮೌಖಿಕ ಹಾಗೂ ಪ್ರಚೋದಾತ್ಮಕ ಲೈಂಗಿಕ ಕಿರುಕುಳಗಳು, ವರದಕ್ಷಣೆ ಕಿರುಕುಳ, ನಡತೆಯ ಬಗ್ಗೆ ಸಂಶಯ ಪಡುವುದು, ಆತ್ಮಹತ್ಯೆಗೆ ಕಾರಣವಾಗುವುದು, ಸ್ವ ಇಚ್ಚೆಯಂತೆ ಮದುವೆ ಆಗುವುದನ್ನು ತಡೆಯುವುದು, ಆರ್ಥಿಕ ಕಿರುಕುಳಗಳಾದ ಉದ್ಯೋಗಕ್ಕೆ ಹೋಗದಂತೆ ತಡೆಯುವುದು, ಮನೆಯಿಂದ ಹೊರದೂಡುವುದು ಹೀಗೆ ವಿವಿಧ ಪ್ರಕಾರಗಳಲ್ಲಿ ತೊಂದರೆಗಳನ್ನು ನೀಡುವುದು ಮಹಿಳಾ ದೌರ್ಜನ್ಯಗಳಾಗುತ್ತದೆ.