ಬಸ್ ಪ್ರಯಾಣ ತುಟ್ಟಿ; ಗಾಯದ ಮೇಲೆ ರಾಜ್ಯದ ಬರೆ
ಶುಕ್ರವಾರ ಮಧ್ಯರಾತ್ರಿಯಿಂದಲೆ ಜಾರಿಗೆ ಬರುವಂತೆ ಬಿಎಂಟಿಸಿ ಮತ್ತ್ತು ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ.
ಬಿಎಂಟಿಸಿ ಶೇ.8.5ರಷ್ಟು ಹೆಚ್ಚಿಸಿದ್ದರೆ ತಾನೇನು ಕಮ್ಮಿ ಎಂದು ಕೆಎಸ್ಸಾರ್ಟಿಸಿ ಶೇ.3.5ರಷ್ಟು ಹೆಚ್ಚಿಸಿದೆ. ಕೆಎಸ್ಸಾರ್ಟಿಸಿ ದೂರ ಪ್ರಯಾಣಿಕರಿಗೆ ದರ ಹೆಚ್ಚಳದ ಬಿಸಿ ಕೈಸುಡುವಂತಿದೆ. ಹತ್ತಿರದ ಪ್ರಯಾಣಿಕರಿಗೆ ತಕ್ಕ ಮಟ್ಟಿಗೆ ಬಿಸಿ ಮುಟ್ಟಿಸಲಾಗಿದೆ. ಪ್ರಯಾಣಿಕರ ಪಾಡು ಕೇಳುವಂತಿಲ್ಲ.
ಬಿಎಂಟಿಸಿಯ ಮೊದಲ ಐದು ಹಂತಗಳಲ್ಲಿ ದರ ಏರಿಕೆಯಿಲ್ಲ. ಪರಿಷ್ಕೃತ ದರಗಳು ಈಶಾನ್ಯ, ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೂ ಅನ್ವಯವಾಗಲಿವೆ. ಇಂಧನ ದರ ಏರಿಕೆಯಿಂದ ಕೆಎಸ್ಸಾರ್ಟಿಸಿಗೆ ವಾರ್ಷಿಕವಾಗಿ ಆಗಬಹುದಾದ 39.53 ಕೋಟಿ ನಷ್ಟ ಸರಿದೂಗಿಸಿಕೊಳ್ಳಲು ಅನಿವಾರ್ಯವಾಗಿ ದರ ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಾಗ ಬಸ್ ಪ್ರಯಾಣ ದರನ್ನು ಏರಿಸಿರಲಿಲ್ಲ. ಯುಪಿಎ ಸರಕಾರ ತುಘಲಕ್ ಮಾದರಿಯಲ್ಲಿ ವರ್ಷಕ್ಕೆ ನಾಲ್ಕು ಬಾರಿ ಇಂಧನ ದರಗಳನ್ನು ಏರಿಕೆ ಮಾಡುತ್ತಿದೆ. ಇದು ಜನ ವಿರೋಧಿ ನೀತಿ.ಕೇಂದ್ರ ತನ್ನ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದು ಅಶೋಕ್ ಹೇಳಿದ್ದಾರೆ.