ಕಾಂಗ್ರೆಸ್ ಕೈಗೆ ಮೆತ್ತಿದ ನೆರೆ ಹಣ ದುರ್ಬಳಕೆ ಕಳಂಕ
ಕಾಂಗ್ರೆಸ್ ನಿಂದ ನೆರೆ ಪರಿಹಾರಕ್ಕಾಗಿ ಒಟ್ಟು 2 ಕೋಟಿ 30 ಲಕ್ಷ ರು. ಸಂಗ್ರಹಿಸಲಾಗಿತ್ತು. ಅದರಲ್ಲಿ 1 ಕೋಟಿ 10 ಲಕ್ಷ ರು. ಮಾತ್ರ ನೆರೆ ಪರಿಹಾರಕ್ಕೆ ವಿನಿಯೋಗಿಸಲಾಗಿದೆ. ಉಳಿದ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮಾಧವನಗರದ ಕೆನರಾ ಬ್ಯಾಂಕ್ ನಲ್ಲಿ ಸುಮಾರು 75 ಲಕ್ಷ ರು.ನಷ್ಟು ಹಣವನ್ನು ಇಡಲಾಗಿದೆ. ಅಲ್ಲದೆ ವಿಮಾನಯಾನ, ಕೆಪಿಸಿಸಿಸಿ ಕಚೇರಿ ರಿಪೇರಿ ಮತ್ತಿತರ ಖರೀದಿಗೆಂದು ಸಾಕಷ್ಟು ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಅನಾಮಧೇಯ ವ್ಯಕ್ತಿಯೊಬ್ಬರು ಟಿವಿ ಚಾನಲ್ ವೊಂದಕ್ಕೆ ದಾಖಲೆಗಳನ್ನು ಕಳುಹಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ ಹೊಸ್ತಿಲಲ್ಲಿರುವಾಗ ಕಾಂಗ್ರೆಸ್ ವರ್ಚಸ್ಸಿಗೆ ಈ ಆರೋಪ ಭಾರೀ ಆಘಾತ ನೀಡಿದೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ 'ಬಾಂಧವ್ಯ'ಕ್ಕೂ ದೊಡ್ಡ ಹೊಡೆತ ನೀಡಿದೆ. ಈ ಆರೋಪದಿಂದಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಹೆಚ್ಚೂಕಡಿಮೆ ಮುರಿದು ಬಿದ್ದಂತಾಗಿದೆ.
ಉತ್ತರ ಕರ್ನಾಟಕದಲ್ಲಿ ಕಳೆದ ವರ್ಷ ಅತಿವೃಷ್ಟಿ ಆದನಂತರ ನೆರೆ ಪರಿಹಾರಕ್ಕಾಗಿ ಕಾಂಗ್ರೆಸ್ ನಿಧಿ ಸಂಗ್ರಹಿಸಿತ್ತು. ಅದರ ಸದ್ ವಿನಿಯೋಗವಾಗದೆ ಕಾಂಗ್ರೆಸ್ ನಿಂದ ದುರ್ಬಳಕೆಯಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಇದಕ್ಕೆ ಸೂಕ್ತವಾದ ಪ್ರತಿಕ್ರಿಯೆ ನೀಡುವಿಕೆಯಿಂದ ಎಲ್ಲ ನಾಯಕರು ನುಣುಚಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ನ ಖಜಾಂಚಿಯಾಗಿರುವ ಶಾಮನೂರು ಶಿವಶಂಕರಪ್ಪ ಅವರು, ಹಣ ದುರ್ಬಳಕೆ ಬಗ್ಗೆ ನನಗೆ ತಿಳಿದೇ ಇಲ್ಲ. ಯಾವ ಚೆಕ್ಕಿಗೂ ನಾನು ಸಹಿ ಹಾಕಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ ಅವರ ಮೇಲೆ ಇದಕ್ಕೆ ಉತ್ತರ ನೀಡುವ ಹೊಣೆಗಾರಿಕೆ ಬಂದಿದ್ದು, ಕಾಗದ ಪತ್ರಗಳನ್ನು ಅವರು ಪರಿಶೀಲಿಸುತ್ತಿದ್ದಾರೆ ಎಂದು ರಾಜಕೀಯ ಮೂಲಗಳಿಂದ ತಿಳಿದುಬಂದಿದೆ.