ಕೈಗಾರಿಕಾ ಕ್ರಾಂತಿಗೆ ಕರ್ನಾಟಕ ಬರೆದ ಮುನ್ನುಡಿ
ಬೆಂಗಳೂರು, ಜೂ. 5 : ಅರಮನೆ ಮೈದಾನದಲ್ಲಿ ಶನಿವಾರ ಮುಕ್ತಾಯವಾದ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕಕ್ಕೆ ಭರ್ಜರಿ ಹಣದ ಹೊಳೆ ಹರಿದುಬಂದಿದೆ. ಭಾರತ ಮತ್ತು ವಿದೇಶಗಳ ಕಂಪನಿಗಳೊಂದಿಗೆ 400ಕ್ಕೂ ಹೆಚ್ಚಿನ ಒಡಂಬಡಿಕೆ ಪತ್ರಗಳಿಗೆ ರಾಜ್ಯ ಸರಕಾರ ಸಹಿ ಹಾಕಿದ್ದು ಭವ್ಯ ಭವಿಷ್ಯದೆಡೆಗೆ ಮುಖ ಮಾಡಿ ನಿಂತಿದೆ.
ಎಲ್ಲ ಯೋಜನೆಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತಂದಲ್ಲಿ ಕನಿಷ್ಠ 4 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ರಾಜ್ಯಕ್ಕೆ ಹರಿದು ಬರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಭಿವೃದ್ಧಿಯಲ್ಲಿ ಹಿಂದಿರುವ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪಿತವಾಗಲಿವೆ ಮತ್ತು ರಾಜ್ಯದಲ್ಲಿ 8.65 ಲಕ್ಷ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ದೊರೆಯಲಿದೆ.
ಸಮಾವೇಶದಲ್ಲಿ ಭಾರತದ ಪ್ರಮುಖ ಉದ್ಯಮಿಗಳಲ್ಲದೆ ಅಮೆರಿಕಾ, ಇಂಗ್ಲೆಂಡ್, ಕೆನಡಾ, ಜರ್ಮನಿ, ಚೀನಾ, ಜಪಾನ್, ಸೌದಿ ಅರೇಬಿಯಾ, ಸಿಂಗಪೂರ್, ಮಲೇಶಿಯಾ, ಯುಎಇ, ಫ್ರಾನ್ಸ್ ದೇಶದ ಉದ್ಯಮಿಗಳು ಪಾಲ್ಗೊಂಡಿದ್ದರು. ಈ ಎಲ್ಲ ಯೋಜನೆಗಳನ್ನು ಸಾಕಾರಗೊಳಿಸಲು ಹಣಕಾಸಿನ ನೆರವನ್ನು ನೀಡಲು ಅನೇಕ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಮುಂದೆ ಬಂದಿವೆ.
ನಿರೀಕ್ಷಿಸಿದಂತೆ ಲಕ್ಷ್ಮಿ ಮಿಟ್ಟಲ್ ಅವರ ಅರ್ಸೆಲರ್ ಮಿಟ್ಟಲ್ ಕಂಪನಿ ಸೇರಿದಂತೆ ಹೆಚ್ಚಿನ ಕಂಪನಿಗಳು ಉಕ್ಕು ಕ್ಷೇತ್ರದಲ್ಲಿ ಬಂಡವಾಳ ಹೂಡಲು ಮುಂದುಬಂದಿವೆ. ಎರಡನೇ ದಿನದ ಕೊನೆ ಅವಧಿಯಲ್ಲಿ ಟಾಟಾ ಮೆಟಾಲಿಕ್ 15 ಸಾವಿರ ಕೋಟಿ ರು. ಬಂಡವಾಳ ಹೂಡಲು ಒಡಂಬಡಿಕೆ ಮಾಡಿಕೊಂಡಿತು. ಅದರಂತೆ, ಜುವಾರಿ ಸಿಮೆಂಟ್ ಉತ್ತರ ಕನ್ನಡ ಜಿಲ್ಲೆಯಲ್ಲಿ 650 ಕೋಟಿ ರು. ಬಂಡವಾಳ ಹೂಡಿ ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸಲು ಸಹಿ ಹಾಕಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಟ್ ಮುದ್ರಣ ಲಿ. ಮೈಸೂರಿನಲ್ಲಿ ನೋಟು ಮುದ್ರಣ ಘಟಕ ಸ್ಥಾಪನೆಗೆ ಸಾವಿರ ಕೋಟಿ ರು. ಬಂಡವಾಳ ಹೂಡಲಿದೆ.
ಈ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಮತ್ತು ಕೈಗಾರಿಕೀಕರಣವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗಲು ರಾಜ್ಯ ಸರಕಾರ ಭಾರತೀಯ ಕೈಗಾರಿಕಾ ಒಕ್ಕೂಟದೊಡನೆ ಸೇರಿ ಕಾರ್ಯಪಡೆಯನ್ನು ಸ್ಥಾಪಿಸಬೇಕೆಂದು ಟಾಟಾ ಸ್ಟೀಲ್ ಉಪಾಧ್ಯಕ್ಷ ಬಿ ಮುತ್ತುರಾಮನ್ ಸಲಹೆ ನೀಡಿದ್ದಾರೆ. ಕೇಂದ್ರ ಸರಕಾರದಿಂದ ಕೂಡ ಯಾವುದೇ ಸಹಾಯ ದೊರಕಿಸಿಕೊಡಲು ಸಿದ್ಧರಿರುವುದಾಗಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.
ಜಾಗತಿಕ ಕೈರಿಕೋದ್ಯಮಿಗಳ ಭರ್ಜರಿ ಪ್ರತಿಕ್ರಿಯೆಯಿಂದ ಆನಂದತುಂದಿಲರಾಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಕೈಗಾರಿಕಾ ಕ್ರಾಂತಿಯ ನೂತನ ಅಧ್ಯಾಯ ಕರ್ನಾಟಕದಲ್ಲಿ ತೆರೆದುಕೊಂಡಿದೆ. ನಿಗದಿತ ಸಮಯದಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಮತ್ತು ಬಂಡವಾಳ ಹೂಡಲು ಮುಂದೆ ಬಂದವರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲು ಶತಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಹಾಗೆಯೇ, ಅವಿರತ ಶ್ರಮ ಹಾಗೂ ಅಸೀಮ ಉತ್ಸಾಹದಿಂದ ಸಮಾವೇಶದ ಯಶಸ್ಸಿನ ರೂವಾರಿಯಾಗಿರುವ ಭಾರಿ ಉದ್ಯಮ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಕಬ್ಬಿಣ ಮತ್ತು ಉಕ್ಕು ಕ್ಷೇತ್ರದಲ್ಲಿ 2.2 ಲಕ್ಷ ಕೋಟಿ ರು.ಯ 38 ಯೋಜನೆಗಳು ಬಂಡವಾಳ ಹೂಡಿಕೆಯಲ್ಲಿ ಸಿಂಹಪಾಲು ಪಡೆದಿವೆ. ಅದರ ಹಿಂದೆ ಸಿಮೆಂಟ್ ಕ್ಷೇತ್ರದಲ್ಲಿ 9 ಯೋಜನೆಗಳು ಮತ್ತು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ 8 ಯೋಜನೆಗಳಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.