ಕೊಂಡಯ್ಯ ಕೊಲೆ: 12 ಜನಕ್ಕೆ ಜೀವಾವಧಿ ಶಿಕ್ಷೆ
2005 ರ ನವೆಂಬರ್ 22 ರಂದು ಬಳ್ಳಾರಿಯಲ್ಲಿ ಏರ್ಪಟ್ಟಿದ್ದ ಜಿಲ್ಲಾ ಜೆಡಿಎಸ್ ಸಭೆಯಲ್ಲಿ ಪಾಲ್ಗೊಳ್ಳಲು ಕಾರ್ನಲ್ಲಿ ಆಗಮಿಸುತ್ತಿದ್ದಾಗ ತೋರಣಗಲ್ ಸಮೀಪದ ಬೂದಗಣಿವೆ (ಈಗಿನ ಕೆಪಿಟಿಸಿಎಲ್) ಪ್ರದೇಶದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತೀವ್ರವಾಗಿ ಕೊಚ್ಚಿ ಕೊಲೆ ಮಾಡಿದ್ದರು.
ಈ ಪ್ರಕರಣ ಕುರಿತು ಜಿಲ್ಲಾ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಏಪ್ರಿಲ್ 12 ರಂದು ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿ ಶಿಕ್ಷೆ ನಿಗಧಿ ಆಗಿತ್ತು. ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟ ಆಯಿತು.
ನ್ಯಾಯಾಧೀಶ ಬೈಲೂರು ಶಂಕರರಾಮ್ ಅವರು ಸೋಮವಾರ ತೀರ್ಪನ್ನು ಪ್ರಕಟ ಮಾಡಿದರು. ತೀರ್ಪಿನ ಪ್ರಕಾರ ಈ ವರೆಗೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ಹೊಸಪೇಟೆ ತಾಲೂಕಿನ ಕಂಪ್ಲಿ ಸಮೀಪದ ಶ್ರೀರಾಮ ರಂಗಾಪುರ ಗ್ರಾಮದ ಎಲ್ಲಾ 12ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಆರೋಪಿಗಳು ನಾರಾಯಣಸ್ವಾಮಿ, ಜಯಚಂದ್ರ, ರಾಮಪ್ಪ, ರಾಘವೇಂದ್ರ, ಕೊಟ್ಟಾಲ ರಾಮಪ್ಪ, ಪಾಲ ನರಸಯ್ಯ, ರಾಮಂಕಿ ನಾರಾಯಣ ಸ್ವಾಮಿ, ರಾಮಚಂದ್ರ, ಗೋಪಾಲ್, ನಿರಂಜನಬಾಬು, ರಾಮಸುಬ್ಬಯ್ಯ ಮತ್ತು ಲಕ್ಷ್ಮೀನಾರಾಯಣಪ್ಪ. ಭೀಮನೇನಿ ಕೊಂಡಯ್ಯ ಅವರ ಕೊಲೆಗೆ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳೇ ಮುಖ್ಯ ಎನ್ನಲಾಗಿದೆ.