ಬೆಂಗಳೂರು ಜನತೆಗೆ 'ನೀರು ಕುಡಿಸಿದ' ಸರಕಾರ
ನಗರದಾದ್ಯಂತ ಅನೇಕ ಬಡಾವಣೆಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ನಲ್ಲಿಯಲ್ಲಿ ನೀರು ಬಾರದೆ ಪ್ರತಿದಿನ ಬೀದಿಯಲ್ಲಿ ಖಾಲಿ ಕೊಡ ಹಿಡಿದು ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ತೊಟ್ಟು ನೀರಿಲ್ಲದಿದ್ದರೂ ನೀರಿನ ದರ ಏರಿಸಿರುವುದು ಜನತೆಯ ಮೈಮೇಲೆ ಬೇಸಿಗೆಯಲ್ಲಿ ಬಿಸಿಬಿಸಿ ನೀರು ಸುರಿದಂತಾಗಿದೆ.
ಬೆಂಗಳೂರು ಮಹಾನಗರದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಮನೆಗಳಲ್ಲಿ ಮಳೆಕೊಯ್ಲು (rain water harvesting)ವಿಧಾನವನ್ನು ಬಳಸಿ ಪರಿಸರ ಜಾಗೃತಿ ಮೆರೆಯುವ ಗ್ರಾಹಕರನ್ನು ಪ್ರೋತ್ಸಾಹಿಸಲು ನೀರಿನ ಬಿಲ್ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದರು.
ನಗರದ ಹೊರವಲಯದ ಹಾರೋಹಳ್ಳಿ ಹಾಗೂ ತೊರೆಕಾಡನಹಳ್ಳಿ ಬಳಿ ನಡೆಯುತ್ತಿರುವ ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟದ ನೀರು ಸರಬರಾಜು ಕಾಮಗಾರಿಯನ್ನು ಪರಿಶೀಲಿಸಿದ ಸಚಿವರು, ನೀರನ ದರ ಹೆಚ್ಚಳದ ಬಗ್ಗೆ ಹೇಳಿದರು. ಕುಡಿಯುವ ನೀರಿನ ದರದಲ್ಲಿ ಶೇ. 33ರಿಂದ 200 ರವರೆಗೆ ಏರಿಕೆ ಕಾಣುವ ಸಾಧ್ಯತೆಯಿದ್ದು, ಕನಿಷ್ಠ 50 ರು.ನಿಂದ 100 ರು.ನಷ್ಟು ಅಧಿಕ ಹಣ ಪಾವತಿ ಮಾಡಬೇಕಾಗುತ್ತದೆ.
ಒಂದೆಡೆ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣ ದುಬ್ಬರ, ಇಂಧನಗಳ ದರಏರಿಕೆ ವಿರುದ್ಧ ಪ್ರತಿಭಟನೆ ನಡೆಸುವ ಬಿಜೆಪಿ ಮತ್ತೊಂದೆಡೆ ಕುಡಿಯುವ ನೀರಿನ ದರ ಏರಿಕೆಯ ಮಾತಾಡುತ್ತಿದೆ. ಇಂದು ಬಸವೇಶ್ವರ ವೃತ್ತದ ಬಳಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.