ಹುಲಿ ಸಾವಿಗೆ ಸಯನೈಡ್ ಕಾರಣ?
ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿರಿಯ ಅಧಿಕಾರಿಗಳು, ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ, ಇಲಾಖಾವಾರು ತನಿಖೆಯೂ ಆರಂಭಗೊಂಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ಮತ್ತೊಂದು ಕೂಲಂಕಷ ಮರಣೋತ್ತರ ಪರೀಕ್ಷೆ ನಡೆಸುವ ಕುರಿತೂ ತೀರ್ಮಾನಿಸಿದೆ. ಹರಾಕ್ ಹತ್ಯೆ ವಿಚಾರವಾಗಿ ಈಗಾಗಲೇ 20ಕ್ಕೂ ಹೆಚ್ಚು ಮಂದಿಯ ವಿಚಾರಣೆಯೂ ನಡೆದಿದೆ.
ವರದಿಯಲ್ಲಿ ಏನಿದೆ?: ಹೆಬ್ಬಾಳದ 'ವನ್ಯಮೃಗಗಳ ರೋಗ ಪತ್ತೆ ಪ್ರಯೋಗಾಲಯ'ದಲ್ಲಿ ನಡೆದಿರುವ ಹರಾಕ್ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸಯನೈಡ್ನಿಂದ ಹುಲಿಯ ಸಾವು ಸಂಭವಿಸಿದೆ. ಮರಣ ಸಂದರ್ಭದಲ್ಲಿ ಹುಲಿಯ ದೇಹದ ಮೇಲೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಆದರೆ, ನಾಲಗೆ ನೀಲಿ ಬಣ್ಣಕ್ಕೆ ತಿರುಗಿತ್ತು ಎಂಬುದನ್ನು ವರದಿ ತಿಳಿಸಿದೆ. ಜತೆಗೆ, ಹೃದಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿದೆ. ಮುಖ್ಯವಾಗಿ ಯಕೃತ್ ಮತ್ತು ಕರುಳು ಭಾಗದಲ್ಲಿ ಹೈಡ್ರೊ ಸಯನೈಡ್ ಇರುವುದು ಖಚಿತವಾಗಿದೆ. ಔಷಧಿ ಮಾರುಕಟ್ಟೆಯಲ್ಲಿ ಹೈಡ್ರೊ ಸಯನೈಡ್ ಸುಲಭಕ್ಕೆ ಸಿಗುವ ರಾಸಯನಿಕವಲ್ಲ. ಅಲ್ಲದೆ ಅದರ ಬಳಕೆ ಕೂಡ ತರಬೇತಿ ಅಗತ್ಯವಿದೆ. ಹಾಗಾಗಿ ಹುಲಿ ಸಾವು ವ್ಯವಸ್ಥಿತ ಸಂಚು ಎನ್ನಲಾಗಿದೆ.
ಒಂದು ತಿಂಗಳಲ್ಲಿ ಪತ್ತೆ: 'ಸಯನೈಡ್' ಅನ್ನು ಆಹಾರ ರೂಪದಲ್ಲಿ ನೀಡಲಾಯಿತೇ? ಸಿರಿಂಜ್ ಮೂಲಕ ಚುಚ್ಚಲಾಯಿತೇ ಎಂಬುದನ್ನು ನಿಖರವಾಗಿ ತಿಳಿಯಲು ಮತ್ತೊಂದು ಮರಣೋತ್ತರ ಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದ್ದೇವೆ. ಮೇಲ್ನೋಟಕ್ಕೆ ಅಪರಿಚಿತರು ಈ ಕೃತ್ಯ ಎಸಗುವುದು ಅಷ್ಟು ಸುಲಭವಲ್ಲ ಎಂಬ ಭಾವನೆ ನನ್ನದು. ನಮ್ಮ ಸಿಬ್ಬಂದಿಯೇ ಹರಾಕ್ನನ್ನು ಸಾಯಿಸಿದ್ದಾರೆ ಎಂದಾದರೆ ಏಕೆ? ಏನು? ಮತ್ತು ಸಯನೈಡ್ ಕೊಂಡದ್ದು ಎಲ್ಲಿ? ಕೊಟ್ಟದ್ದು ಯಾರು? ಹತ್ಯೆ ಹಿಂದಿನ ಕಾರಣವೇನು? ಇತ್ಯಾದಿ ಎಲ್ಲವನ್ನೂ ಒಂದು ತಿಂಗಳ ಒಳಗೆ ಪತ್ತೆ ಮಾಡುತ್ತೇವೆ. ಆರೋಪಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ' ಎಂದು ಬನ್ನೇರುಘಟ್ಟ ರಾಷ್ಟ್ರೀಯಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಮಿಲ್ಯಾಯೊ ಟ್ಯಾಗೊ ಭರವಸೆ ನೀಡುತ್ತಾರೆ.