ಈದ್ಗಾ ಬೇಡ, ಹುತಾತ್ಮರ ಮೈದಾನವೆನ್ನಿ!
ಸುಪ್ರೀಂಕೋರ್ಟ್ ತೀರ್ಪಿನಿಂದ, ಈ ಮೈದಾನದ ಸಂಪೂರ್ಣ ಮಾಲೀಕತ್ವ ಹಾಗೂ ಹಕ್ಕುಗಳು ಕೇವಲ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯವು ಎಂಬುದು ಸ್ಪಷ್ಟವಾಗಿದೆ. ಈಗ ಈ ಮೈದಾನವನ್ನು ಈದ್ಗಾ ಮೈದಾನವೆಂದು ಕರೆಯುವುದು ಅಸಮಂಜಸ ಹಾಗೂ ನ್ಯಾಯಾಲಯದ ತೀರ್ಪಿನ ವಿರುದ್ಧ ಎನಿಸುವುದು.
ಹಲವು ವರುಷಗಳಿಂದ, ಇಲ್ಲಿ, ನಮ್ಮ ದೇಶದ ಸ್ವಾಭಿಮಾನದ ದ್ಯೋತಕವಾದ ರಾಷ್ಟ್ರಧ್ವಜವನ್ನು ಹಾರಿಸಲು ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮೈದಾನ ಭಾರತದ ಅವಿಭಾಜ್ಯ ಅಂಗವಾಗಿದೆಯೋ ಇಲ್ಲವೋ ಎನ್ನುವ ಸಂಶಯ ಹುಟ್ಟುವಂತಹ ಸ್ಥಿತಿ ಇತ್ತು. ಇಂತಹ ವಿಷಯ ಕಾಲಘಟ್ಟದಲ್ಲಿ ಅನೇಕ ರಾಷ್ಟ್ರಾಭಿಮಾನಿ ನಾಗರಿಕರು ತಮ್ಮ ಜೀವದ ಹಂಗು ತೊರೆದು ಹೋರಾಡಿದರು. 15 ಆಗಸ್ಟ್ 1994ರಂದು ಹೋರಾಟ ತಾರಕಕ್ಕೇರಿದಾಗ ಪೊಲೀಸರ ಗುಂಟೇಟಿಗೆ ಆರು ರಾಷ್ಟ್ರಾಭಿಮಾನಿಗಳು ಹುತಾತ್ಮರಾದರು. ಇಂಥವರ ಧೀರೋದಾತ್ತ ತ್ಯಾಗದಿಂದಲೇ ಇಂದು ಪಾಲಿಕೆಯ ಮೈದಾನ ತನ್ನ ಸಂಕೋಲೆಗಳನ್ನು ಕಳೆದುಕೊಂಡು ಮತ್ತೆ ಪಾಲಿಕೆಯ ಕೈವಶವಾಗಿದೆ. ಪಾಲಿಕೆಯ ವತಿಯಿಂದಲೇ ಧ್ವಜಾ ರೋಹಣಕ್ಕೆ ತಯಾರಾಗಿ ನಿಂತಿದೆ.
ಈ ಸಂದರ್ಭದಲ್ಲಿ ಈ ಹುತಾತ್ಮರನ್ನು ನೆನೆಯುವುದು ಹಾಗೂ ಅವರ ಚಿರಂತನ ನೆನಪಿಗಾಗಿ ಸ್ಮಾರಕ ನಿರ್ಮಿಸುವುದರ ಬಗ್ಗೆ ಚಿಂತಿಸುವುದು ಅತ್ಯಂತ ಕಾಲೋಚಿತ ಎನಿಸುತ್ತದೆ. ಆದ್ದರಿಂದ ಪಾಲಿಕೆಯ ಮೈದಾನವನ್ನು ಸ್ವತಂತ್ರಗೊಳಿಸುವುದಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಹುತಾತ್ಮರ ಚಿರಸ್ಮರಣೆಗಾಗಿ, ಈಗ ಈದ್ಗಾ ಮೈದಾನ' ಎಂದು ಕರೆಯಲಾಗುತ್ತಿರುವ ಪಾಲಿಕೆಯ ಮೈದಾನವನ್ನು ಇನ್ನುಮುಂದೆ ಎಲ್ಲರೂ ಹುತಾತ್ಮ ಮೈದಾನ ಎಂದು ಸಂಬೋಧಿಸಬೇಕು.
ಈಗಿರುವ ಅಕ್ರಮ ಕಟ್ಟಡಗಳನ್ನು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಿದ ಬಳಿಕ ಆ ಸ್ಥಳದಲ್ಲಿ ಒಂದು ಸುಂದರವಾದ ಅರ್ಥಪೂರ್ಣವಾದ ಹುತಾತ್ಮ ಸ್ಮಾರಕವನ್ನು ನಿರ್ಮಿಸಬೇಕು. ಧಾರವಾಡದಲ್ಲಿ ಕಾರ್ಗಿಲ್ ಸ್ತೂಪದ ಮಾದರಿಯಲ್ಲಿ, ಈ ಸ್ಮಾರಕದ ಸುತ್ತ ಒಂದು ಚಿಕ್ಕ ಉಪವನವನ್ನು ನಿರ್ಮಿಸಬೇಕು. ಹುತಾತ್ಮರಾದವರ ಪುತ್ಥಳಿಗಳನ್ನು ಇಲ್ಲಿ ಸ್ಥಾಪಿಸಬೇಕು. ಇದಲ್ಲದೇ ನ್ಯಾಯಾಲಯದ ಅಭಿಪ್ರಾಯದಂತೆ ಈ ಮೈದಾನದಲ್ಲಿ ಒಂದು ಸುಂದರ ಉಪವನವನ್ನು ಅಭಿವೃದ್ಧಿಪಡಿಸಿ ಅದಕ್ಕೆ ಹುತಾತ್ಮ ಸ್ಮಾರಕ ಉಪವನ' ಎಂದು ಹೆಸರಿಡಬೇಕು.