ಗ್ರಹಣ ನೋಡುವವರಿಗೆ ಕಾಫಿ ಟೀ ಬಿಸ್ಕತ್
ಬೆಳಿಗ್ಗೆ 11 ಗಂಟೆಯಿಂದ ಆರಂಭವಾಗುವ ಕಂಕಣ ಗ್ರಹಣವು ಮಧ್ಯಾಹ್ನ 3 ಕ್ಕೆ ಕೊನೆಗೊಳ್ಳಲಿದೆ. ಶತಮಾನದ ಅಪರೂಪದ ವ್ಶೆಜ್ಞಾನಿಕ ಘಟನೆಯಾದ ಗ್ರಹಣವನ್ನು ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಖಗೋಳ ಆಸಕ್ತರು ವೀಕ್ಷಿಸಲು ಜಿಲ್ಲೆಯಲ್ಲಿ ಆಯ್ದ ಶಾಲಾ ಕಾಲೇಜುಗಳಲ್ಲಿ ಗ್ರಹಣ ವೀಕ್ಷಣಾ ಕೇಂದ್ರಗಳನ್ನು ವಿಜ್ಞಾನ ಪರಿಷತ್ ವತಿಯಿಂದ ತೆರೆಯಲಾಗುತ್ತದೆ.
ವಿಜ್ಞಾನ ಪರಿಷತ್ ವತಿಯಿಂದ ಗ್ರಹಣ ವೀಕ್ಷಿಸಲು ಸೌರ ಕನ್ನಡಕಗಳನ್ನು ಈಗಾಗಲೇ ವೀಕ್ಷಣಾ ಕೇಂದ್ರಗಳಿಗೆ ಒದಗಿಸಲಾಗಿದೆ. ಈ ಸಂದರ್ಭ ಗ್ರಹಣ ಕುರಿತಂತೆ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಖಗೋಳ ಆಸಕ್ತರಿಗೆ ಗ್ರಹಣದ ಕುರಿತು ವೈಜ್ಞಾನಿಕ ಮಾಹಿತಿ ನೀಡಲಾಗುವುದು.
ಗ್ರಹಣವನ್ನು ಬರೀಗಣ್ಣಿನಿಂದ ನೋಡದೆ ಸೌರ ಕನ್ನಡಕ ಇಲ್ಲವೇ ಸುರಕ್ಷತಾ ಸಾಧನಗಳ ಮೂಲಕ ವೀಕ್ಷಿಸಬಹುದು. ಈ ಸಂದರ್ಭದಲ್ಲಿ ಕಾಫಿ, ಟೀ, ಬಿಸ್ಕತ್ , ಬಾಳೆಹಣ್ಣು ಮತ್ತಿತರ ಆಹಾರ ಸೇವಿಸುವ ಮೂಲಕ ಗ್ರಹಣ ಬಗ್ಗೆ ಇರುವ ಮೌಢ್ಯತೆ ತೊಡೆದು ಹಾಕಲು ಶಿಕ್ಷಕ ಸಮುದಾಯ ಹಾಗೂ ಖಗೋಳ ಆಸಕ್ತರಲ್ಲಿ ಮನವಿ ಮಾಡಲಾಗಿದೆ.
ಜಿಲ್ಲೆಯಲ್ಲಿ ವಿಜ್ಞಾನ ಪರಿಷತ್ ವತಿಯಿಂದ ಮಡಿಕೇರಿ ಸಂತ ಮೈಕಲ್ ರ ಪ್ರೌಢಶಾಲೆ, ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆ, ಗೋಣಿಕೊಪ್ಪ ಪ್ರೌಢಶಾಲೆ, ಸೋಮವಾರಪೇಟೆ, ಸುಂಟಿಕೊಪ್ಪ, ಕುಶಾಲನಗರ, ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೂಡಿಗೆ ಡಯಟ್, ಕುಶಾಲನಗರ ವಿವೇಕಾನಂದ ಪಿ.ಯೂ.ಕಾಲೇಜು, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಮಾದಾಪುರ ಡಿ.ಚೆನ್ನಮ್ಮ ಕಾಲೇಜು, ಕೊಡಗನಹಳ್ಳಿ ಸುಂಡಿಕೊಪ್ಪ ನಾಡು ಪ್ರೌಢಶಾಲೆ ಹಾಗೂ ಶಾಂತಿನೀಕೇತನ ಪ್ರೌಢಶಾಲೆಗಳ ಕೇಂದ್ರಗಳಲ್ಲಿ ಗ್ರಹಣ ವೀಕ್ಷಿಸಲು ಈಗಾಗಲೇ ಸೌರ ಕನ್ನಡಕಗಳನ್ನು ವಿತರಿಸಲಾಗಿದೆ.