ಬಿಜೆಪಿ 18 ಸ್ಥಾನ ಗೆದ್ದರೆ ಡಿಕೆಶಿ ರಾಜಿನಾಮೆ!
ಭ್ರಮೆಯಲ್ಲಿ ತೇಲುತ್ತಿರುವ ಬಿಜೆಪಿಯವರ ಕೊನೆಯ ದಿನಗಳ ಕೌಂಟ್ಡೌನ್ ಆರಂಭವಾಗಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ರಾಜ್ಯದಲ್ಲಿ 18 ಸ್ಥಾನಗಳಲ್ಲಿ ಜಯಗಳಿಸುವುದು ಖಚಿತವಾಗಿದೆ ಎಂದು ಡಿ.ಕೆ.ಶಿವಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವರೆಂದು ಹೇಳಿರುವ ಧರ್ಮ್ಸಿಂಗ್ರ ಭವಿಷ್ಯದ ಗರ್ಭದಲ್ಲೇನಿದೆ ಎಂಬುದು ನನಗೆ ಗೊತ್ತಾಗಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಇಂತಹ ಸಂದರ್ಭ ನಿರ್ಮಾಣವಾಗಿಲ್ಲ. ಕಾಂಗ್ರೆಸ್ ಪಕ್ಷ ಜನರ ಬಳಿ ಹೋಗಲು ಸಿದ್ಧವಾಗಿದೆ, ಹಿಂಬಾಗಿಲಿನ ಮೂಲಕ ರಾಜಕಾರಣ ಮಾಡುವ ಅನಿವಾರ್ಯತೆ ಕಾಂಗ್ರೆಸ್ಗೆ ಎದುರಾಗಿಲ್ಲವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಯಾವುದೇ ರೀತಿಯ ಫ್ರೆಂಡ್ಲಿ ಫೈಟ್ ಇಲ್ಲ. ಏನಿದ್ದರು ಡೆಡ್ಲಿ ಫೈಟ್ ಅಷ್ಟೇ. ಈಗಾಗಲೇ ಬಿಜೆಪಿಯ 200ಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ ಪರವಾಗಿದ್ದಾರೆ. ಕಣದಲ್ಲಿ ಬಿಜೆಪಿ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಅಥವಾ ಜೆಡಿಎಸ್ ಗೆಲ್ಲಬಹುದು ಆದರೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಕ್ಷೇತ್ರದಲ್ಲಿ ಗೆಲುವು ಸಾಧ್ಯವೇಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.