ಮುಂದೇನು, ರೆಡ್ಡಿಗಳು ಏನೇನೆಲ್ಲಾ ಮಾಡ್ಬಹುದು ?
ರೆಡ್ಡಿಗಳು ಏನೇನೆಲ್ಲಾ ಮಾಡಬಹುದು...
ರೆಡ್ಡಿಗಳ ಬಳಿ ಇದ್ದಾರೆ ಎನ್ನಲಾದ ಸುಮಾರು 60ಕ್ಕೂ ಹೆಚ್ಚು ಶಾಸಕರು ಸಾಮೂಹಿಕ ರಾಜೀನಾಮೆಗೆ ಸಜ್ಜಾಗಬಹುದು. ಅಥವಾ ರಾಜೀನಾಮೆ ನೀಡುತ್ತೇನೆ ಎಂಬ ಎಚ್ಚರಿಕೆಯನ್ನು ಪಕ್ಷದ ಹೈಕಮಾಂಡ್ ಗೆ ರವಾನಿಸಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ನ ಹೋಟೆಲ್ ತಂಗಿರುವ ರೇಣುಕಾಚಾರ್ಯ ಎಂಡ್ ಕಂಪನಿ ನಾಯಕತ್ವ ಬದಲಾಗಬೇಕು, ಇಲ್ಲದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಈಗಾಗಲೇ ಹೇಳಿದ್ದಾರೆ.
ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರವನ್ನು ಕಳೆದುಕೊಳ್ಳಲು ಬಿಜೆಪಿ ಹೈಕಮಾಂಡ್ ಮನಸ್ಸು ಮಾಡುವುದಿಲ್ಲ ಎನ್ನುವುದು ಒಂದಡೆಯಾದರೆ, ರೆಡ್ಡಿ ಬಣದ ಗುಂಪಿನಲ್ಲಿ ಶಾಸಕರ ಸಂಖ್ಯೆ ಹೆಚ್ಚಾಗಿ ಪಕ್ಷದಿಂದಲೇ ಹೊರಹೋಗುತ್ತೇವೆ ಎಂಬ ಗುಡುಗು ರೆಡ್ಡಿ ಹಾಕಿದರೆ, ಹೈಕಮಾಂಡ್ ಮಣಿಯುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಆಗ ಯಡಿಯೂರಪ್ಪ ಕುರ್ಚಿ ಕಳೆದುಕೊಳ್ಳುವ ಸಾಧ್ಯತೆಯಿದೆ.
ಒಂದು ಮೂರರಷ್ಟು ಭಾಗದ ಶಾಸಕರು ಪಕ್ಷದಿಂದ ಹೊರಹೋಗಬಹುದು. ಹೊರಹೋದ ರೆಡ್ಡಿಗಳು ಕಾಂಗ್ರೆಸ್ ಜೊತೆ ಸರಕಾರ ರಚಿಸಬಹುದು. ರೆಡ್ಡಿ ಬಣದಲ್ಲಿರುವವರು ರಾಜಕೀಯದಲ್ಲಿ ಅನನುಭವಿಗಳು. ಅವರಿಗೆ ಯಾವುದೇ ಪಕ್ಷ ನಿಷ್ಠೆ ಇಲ್ಲ. ಅವರಿಗೆ ಕಾಂಗ್ರೆಸ್ ಆದರೂ ಇನ್ನೊಂದು ಆದರೂ ಸರಿ. ಒಟ್ಟಿನಲ್ಲಿ ಯಡಿಯೂರಪ್ಪ ಅವರನ್ನು ವಿರೋಧಿಸಬೇಕು. ಕೆಲವು ಕರಾರಿನ ಮೂಲಕ ಕಾಂಗ್ರೆಸ್ ಪಕ್ಷ ರೆಡ್ಡಿಗಳನ್ನು ಬೆಂಬಲಿಸಬಹುದು. ಬಾಹ್ಯ ಬೆಂಬಲ ನೀಡಲು ಸೋನಿಯಾ ಗಾಂಧಿ ಕೂಡಾ ಸಮ್ಮತಿಸಬಹುದು.
ಒಂದು ವೇಳೆ ಯಡಿಯೂರಪ್ಪ ಅವರ ಕುರ್ಚಿ ಕೇಳುವುದು ಬಿಟ್ಟು ಬೇರೆ ಏನನ್ನಾದರೂ ಈಡೇರಿಸಲು ಸಿದ್ದ ಎಂದು ಬಿಜೆಪಿ ಜನಾರ್ದನರೆಡ್ಡಿ ಮನವೊಲಿಸಿದರೆ, ಕರುಣಾಕರರೆಡ್ಡಿ ಇಲ್ಲವೆ ಜಗದೀಶ್ ಶೆಟ್ಟರ್ ಗೃಹ ಮಂತ್ರಿಯಾಗಬಹುದು. ಈ ಇಬ್ಬರಲ್ಲಿ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ಗ್ಯಾರಂಟಿ. ಶೋಭಾ ಕರಂದ್ಲಾಜೆ, ವಿಪಿ ಬಳಿಗಾರ್ ಅವರ ಎತ್ತಂಗಡಿ ನಿಶ್ಚಿತ. ರೆಡ್ಡಿಗಳ ಇನ್ನಿತರ ಬೇಡಿಕೆಗಳು ಈಡೇರುವ ಸಾಧ್ಯತೆ. ಈ ಬೇಡಿಕೆಗಳಿಗೆ ಸಿಎಂ ಒಪ್ಪುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.
ಆಕಸ್ಮಾತ್ ಚುನಾವಣೆಯೇ ಅನಿವಾರ್ಯವಾದರೆ, ಈಗಾಗಲೇ ಎದ್ದಿರುವ ಗಾಳಿ ಸುದ್ದಿಯಂತೆ ರೆಡ್ಡಿಗಳು ಉತ್ತರ ಕರ್ನಾಟಕದ 10 ಜಿಲ್ಲೆಗಳಿಗೆ ಸಿಮೀತ ಮಾಡಿಕೊಂಡು ನೂತನ ಪ್ರಾದೇಶಿಕ ಪಕ್ಷ ರಚಿಸಿ ಅಖಾಡಕ್ಕಿಳಿಯಬಹುದು. ಇಲ್ಲವೇ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರೂ ಅಚ್ಚರಿಯಿಲ್ಲ. ಸುಷ್ಮಾ ಸ್ವರಾಜ್ ಅವರ ಅತ್ಮೀಯರಾದ ರೆಡ್ಡಿಗಳು ಪಕ್ಷ ತ್ಯಜಿಸುವುದು ಸಾಧ್ಯವಿಲ್ಲ ಎನ್ನುವ ಮಾತು ಇದೆ.
ಯಡಿಯೂರಪ್ಪ ಬಣ ಏನೇನೆಲ್ಲಾ ಮಾಡಬಹುದು...
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ನಂಬಿರುವ ಅನೇಕ ಶಾಸಕರು ಅವರ ನಾಯಕತ್ವದಲ್ಲಿ ಸರಕಾರ ನಡೆಯುವುದಾದರೆ ನಡೆಯಲಿ ಇಲ್ಲದಿದ್ದರೆ, ನಾವು ಜನರ ಬಳಿ ಹೋಗಲು ರೆಡಿ ಎಂಬಂತಹ ಮಾತುಗಳನ್ನು ಆಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬೇರೆ ನಾಯಕತ್ವ ಒಪ್ಪಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಗದೀಶ್ ಶೆಟ್ಟರ್ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ, ಯಡಿಯೂರಪ್ಪ ಅವರನ್ನು ಬಲಿ ಕೊಡಲು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಆದರೆ, ಕರ್ನಾಟಕದಲ್ಲಿ ಒಂದು ವಾರ ಬಂದು ಹೋದ ನೆರೆ ಇಡೀ ರಾಜ್ಯದ ನೆಮ್ಮದಿಯನ್ನು ಹಾಳು ಮಾಡಿದ್ದಂತೂ ಸುಳ್ಳಲ್ಲ. ಒಂದಡೆ ಲಕ್ಷಾಂತರ ಮಂದಿ ಸಂತ್ರಸ್ತರಾದರೆ, ರಾಜಕೀಯ ನಾಯಕರ ಸ್ವಪ್ರತಿಷ್ಠೆಗಾಗಿ ಒಂದು ಸರಕಾರವನ್ನೇ ಕಿತ್ತು ಹಾಕಲು ನಿರ್ಧರಿಸಿರುವುದು ಎಷ್ಟು ಸರಿ. ಒಂದಂದೂ ಸತ್ಯ ಕರ್ನಾಟಕದ ಜನರು ಅಪಾರ ನಿರೀಕ್ಷೆ ಸಂಪೂರ್ಣ ಕುಸಿದಿದೆ. ಜನರಿಗೆ ಬಿಜೆಪಿ ಬಗ್ಗೆ ಭ್ರಮನಿರಶನವಾಗಿದೆ. ಈ ಎಲ್ಲ ಬೆಳವಣಿಗೆಯಿಂದ ಬಿಜೆಪಿಗೆ ದೊಡ್ಡ ಡ್ಯಾಮೇಜಂತೂ ಆಗಿರುವುದು ಸುಳ್ಳಲ್ಲ.
(ದಟ್ಸ್ ಕನ್ನಡ ವಾರ್ತೆ)